ತುಳುವಿನಲ್ಲಿ ಮಾತನಾಡಿ ಅಭಿಮಾನಿಗಳ ಮನಗೆದ್ದ ಶಾರುಖ್..!

0
110

ಮಂಗಳೂರು : ಬಾಲಿವುಡ್‌ನ ಕಿಂಗ್ ಖಾನ್ ಶಾರುಖ್ ಖಾನ್ ಹಲವು ವರ್ಷಗಳ ಬಳಿಕ ಮಂಗಳೂರಿಗೆ ಆಗಮಿಸಿ ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದರು. ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ಮಂಗಳೂರಿನ ಜನರಿಂದ ದೊರೆತ ಅದ್ಧೂರಿ ಸ್ವಾಗತಕ್ಕೆ ಸಂತಸ ವ್ಯಕ್ತಪಡಿಸಿ, “ಮಂಗಳೂರಿನಲ್ಲಿ ಕಳೆದ ದಿನಗಳು ಸ್ಪಷ್ಟವಾಗಿ ನೆನಪಿಲ್ಲ. ಆದರೆ ಇಲ್ಲಿಂದ ಸವಿನೆನಪುಗಳನ್ನು ತೆಗೆದುಕೊಂಡು ಹೋಗುತ್ತಿದ್ದೇನೆ” ಎಂದು ಭಾವುಕರಾಗಿ ಹೇಳಿದರು.

ಗುರುವಾರ (ಜೂನ್ 25) ಮಧ್ಯಾಹ್ನ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಶಾರುಖ್ ಖಾನ್ ಅವರನ್ನು ನೋಡಲು ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದರು. ವಿಮಾನ ನಿಲ್ದಾಣದಿಂದ ಕಾರ್ಯಕ್ರಮ ನಡೆಯುವ ಸ್ಥಳದವರೆಗೂ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು.

ತುಳುವಿನಲ್ಲಿ ಅಭಿಮಾನಿಗಳಿಗೆ ಶುಭಾಶಯ

ಮಂಗಳೂರಿನ ಅಡ್ಯಾರ್‌ನಲ್ಲಿರುವ ಗಾರ್ಡನ್‌ನಲ್ಲಿ ಆಯೋಜಿಸಿದ್ದ ‘An Evening with Shah Rukh Khan’ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾರುಖ್ ಖಾನ್, ತುಳು ಭಾಷೆಯಲ್ಲೇ ಅಭಿಮಾನಿಗಳನ್ನು ಅಭಿನಂದಿಸಿ ಎಲ್ಲರ ಮನಗೆದ್ದರು. ತಮ್ಮ ಬಾಲ್ಯದ ಕೆಲವು ದಿನಗಳನ್ನು ಮಂಗಳೂರಿನಲ್ಲಿ ಕಳೆದಿರುವುದಾಗಿ ನೆನಪಿಸಿಕೊಂಡ ಅವರು, ಕರಾವಳಿಯೊಂದಿಗೆ ತಮ್ಮ ಭಾವನಾತ್ಮಕ ಸಂಬಂಧವನ್ನು ಹಂಚಿಕೊಂಡರು.

ವೇದಿಕೆಯಲ್ಲಿ ಮಾತನಾಡಿದ ಶಾರುಖ್ ಖಾನ್,

“ನಾನು ಇಲ್ಲಿಗೆ ಬಂದಾಗ ನಿಮ್ಮ ಪ್ರೀತಿ ಮತ್ತು ಅದ್ಭುತ ಸ್ವಾಗತವನ್ನು ಕಂಡೆ. ಅದಕ್ಕಾಗಿ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು. ನನ್ನ ಬಾಲ್ಯದ ಕೆಲವು ದಿನಗಳನ್ನು ಮಂಗಳೂರಿನಲ್ಲಿ ಕಳೆದಿದ್ದೆ. ಆಗ ನಾನು ತುಂಬಾ ಚಿಕ್ಕವನಾಗಿದ್ದೆ. ಆ ದಿನಗಳ ನೆನಪುಗಳು ಸ್ಪಷ್ಟವಾಗಿ ಇಲ್ಲ. ಆದರೆ ಮಂಗಳೂರಿಗೆ ಮತ್ತೆ ಬಂದು ಇಲ್ಲಿಂದ ಕೆಲವು ಸವಿನೆನಪುಗಳನ್ನು ತೆಗೆದುಕೊಂಡು ಹೋಗಬೇಕು ಎಂಬ ಆಸೆ ಇತ್ತು. ಇಂದು ಅದು ಈಡೇರಿದೆ.” ಎಂದು ಹೇಳಿದರು.

ಮಂಗಳೂರಿನ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಸಂಸ್ಥೆಯಾದ ರೋಹನ್ ಕಾರ್ಪೊರೇಶನ್ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಶಾರುಖ್ ಖಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಂಸ್ಥೆಯ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ಅವರು, ಅಭಿಮಾನಿಗಳೊಂದಿಗೆ ಸಂವಾದ ನಡೆಸಿ, ಫೋಟೋಗಳಿಗೆ ಪೋಸ್ ನೀಡಿ ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು.

‘ಕಿಂಗ್’ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ

ಸದ್ಯ ಶಾರುಖ್ ಖಾನ್ ತಮ್ಮ ಬಹುನಿರೀಕ್ಷಿತ ‘King’ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಈ ಚಿತ್ರವನ್ನು ಅವರದೇ ಹೋಮ್ ಪ್ರೊಡಕ್ಷನ್ ನಿರ್ಮಿಸುತ್ತಿದೆ. ಬ್ಯುಸಿ ವೇಳಾಪಟ್ಟಿಯ ನಡುವೆಯೂ ವಿಶೇಷ ಸಮಯ ಮೀಸಲಿಟ್ಟು ಮಂಗಳೂರಿಗೆ ಭೇಟಿ ನೀಡಿರುವುದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ.

LEAVE A REPLY

Please enter your comment!
Please enter your name here