ಬಳ್ಳಾರಿ : ಮಹಿಳೆಯೊಬ್ಬರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿ ನಿರಂತರ ಕಿರುಕುಳ ನೀಡುತ್ತಿದ್ದ ಯುವಕನನ್ನು, ಆ ಮಹಿಳೆ ತನ್ನ ಪತಿ ಹಾಗೂ ಸಹೋದರನೊಂದಿಗೆ ಸೇರಿ ಹತ್ಯೆಗೈದು ಮೃತದೇಹವನ್ನು ಸುಟ್ಟು ಸಾಕ್ಷ್ಯ ನಾಶಪಡಿಸಲು ಯತ್ನಿಸಿದ ಘಟನೆ ಬಳ್ಳಾರಿಯಲ್ಲಿ ಬೆಳಕಿಗೆ ಬಂದಿದೆ.
ಖಾಸಗಿ ಲ್ಯಾಬ್ನಲ್ಲಿ ಕೆಲಸ ಮಾಡುತ್ತಿದ್ದ ಪಾಟೀಲ್ ಬಸವನಗೌಡ (26) ಜೂನ್ 7ರಂದು ನಾಪತ್ತೆಯಾಗಿದ್ದು, ಮರುದಿನ ಎಲ್ಎಲ್ಸಿ ಕಾಲುವೆ ಸಮೀಪದ ನಿರ್ಜನ ಪ್ರದೇಶದಲ್ಲಿ ಅರ್ಧ ಸುಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡ ಮೋಕಾ ಠಾಣೆ ಪೊಲೀಸರು ತನಿಖೆ ನಡೆಸಿದ ವೇಳೆ ಕೊಲೆಯ ಹಿಂದಿನ ಆಘಾತಕಾರಿ ಸತ್ಯ ಬಹಿರಂಗವಾಗಿದೆ.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಬಸವನಗೌಡನಿಗೆ ದೂರದ ಸಂಬಂಧದ ಅತ್ತಿಗೆಯಾಗುವ ಶ್ವೇತಾ ಪರಿಚಯವಿದ್ದು, ಕಳೆದ ಒಂದು ವರ್ಷದಿಂದ ಆಕೆಗೆ ಅಶ್ಲೀಲ ಫೋಟೋಗಳು ಹಾಗೂ ಸಂದೇಶಗಳನ್ನು ಕಳುಹಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತ ಶ್ವೇತಾ ಈ ವಿಷಯವನ್ನು ತನ್ನ ಪತಿ ದೊಡ್ಡಬಸವನಗೌಡ ಹಾಗೂ ಸಹೋದರ ವಿಜಯ್ಗೆ ತಿಳಿಸಿದ್ದಳು.

ಇದಾದ ಬಳಿಕ ಮೂವರು ಸೇರಿ ಬಸವನಗೌಡನ ಹತ್ಯೆಗೆ ಸಂಚು ರೂಪಿಸಿದ್ದಾರೆ ಎನ್ನಲಾಗಿದೆ. ಜೂನ್ 7ರಂದು ಶ್ವೇತಾ ಕರೆ ಮಾಡಿ ನಿರ್ಜನ ಪ್ರದೇಶಕ್ಕೆ ಬರಲು ಹೇಳಿದ್ದು, ಅಲ್ಲಿ ಬಂದ ಬಸವನಗೌಡನನ್ನು ಹಗ್ಗದಿಂದ ಕುತ್ತಿಗೆ ಬಿಗಿದು ಹತ್ಯೆ ಮಾಡಲಾಗಿದೆ. ಬಳಿಕ ಮೃತದೇಹವನ್ನು ಸುಮಾರು 10 ಕಿಲೋಮೀಟರ್ ದೂರದ ಕಾಲುವೆ ಪಕ್ಕಕ್ಕೆ ಸಾಗಿಸಿ ಪೆಟ್ರೋಲ್ ಸುರಿದು ಸುಟ್ಟು ಹಾಕಲಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಮೊಬೈಲ್ ಕರೆಗಳ ವಿವರ (ಸಿಡಿಆರ್) ಹಾಗೂ ಇತರೆ ತಾಂತ್ರಿಕ ಸಾಕ್ಷ್ಯಗಳ ಆಧಾರದಲ್ಲಿ ತನಿಖೆ ನಡೆಸಿದ ಮೋಕಾ ಠಾಣೆ ಪೊಲೀಸರು ಶ್ವೇತಾ, ಆಕೆಯ ಪತಿ ದೊಡ್ಡಬಸವನಗೌಡ ಮತ್ತು ಸಹೋದರ ವಿಜಯ್ ಅವರನ್ನು ಬಂಧಿಸಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.
ಈ ಘಟನೆ ಮಹಿಳೆಯರ ಮೇಲಿನ ಕಿರುಕುಳ ಎಷ್ಟು ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು ಎಂಬುದನ್ನು ತೋರಿಸುವುದರ ಜೊತೆಗೆ, ಕಾನೂನನ್ನು ಕೈಗೆತ್ತಿಕೊಳ್ಳುವ ಪ್ರವೃತ್ತಿ ಮತ್ತೊಂದು ದುರಂತಕ್ಕೆ ದಾರಿ ಮಾಡಿಕೊಡುತ್ತದೆ ಎಂಬುದನ್ನೂ ನೆನಪಿಸಿದೆ.

