ಬಜಪೆ :ಯಕ್ಷದ್ರುವ ಪಟ್ಲ ಫೌಂಡೇಶನ್ ನ ಸಂಸ್ಥಾಪಕ ಸತೀಶ್ ಶೆಟ್ಟಿ ಅವರು ಯಕ್ಷಗಾನವನ್ನು ಉಳಿಸಿ ಬೆಳೆಸಬೇಕೆನ್ನುವ ತೀವ್ರ ಆಕಾಂಕ್ಷೆಯನ್ನು ಉಳ್ಳವರಾಗಿದ್ದು ವಿದ್ಯಾರ್ಥಿಗಳಲ್ಲಿ ಹೊಸ ಕಲಾವಿದರನ್ನು ಸೃಷ್ಟಿಸುವ ನಿಟ್ಟಿನಲ್ಲಿ ನಿರಂತರ ಮೂರು ವರ್ಷಗಳಲ್ಲಿ ಬೇರೆ ಬೇರೆ ಶಿಕ್ಷಣ ಸಂಸ್ಥೆಗಳಲ್ಲಿ ಯಕ್ಷ ಶಿಕ್ಷಣ ಅಭಿಯಾನವನ್ನು ಪ್ರಾರಂಭಿಸ ಲಾಗಿದೆ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಕಟೀಲು – ಎಕ್ಕಾರು ಘಟಕದ ಸಂಚಾಲಕ ನಿತೇಶ್ ಶೆಟ್ಟಿ ಎಕ್ಕಾರು ಹೇಳಿದರು.
ಅವರು ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರಿನಲ್ಲಿ ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ಯಕ್ಷದ್ರುವ ಯಕ್ಷ ಶಿಕ್ಷಣ ಯಕ್ಷಗಾನ ಶಿಕ್ಷಣ ಅಭಿಯಾನದ ಅಂಗವಾಗಿ ನಾಲ್ಕನೇ ವರ್ಷದ ಯಕ್ಷ ಶಿಕ್ಷಣದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಯಕ್ಷಗಾನ ನಾಡು ಕಂಡ ಸರ್ವಶ್ರೇಷ್ಠಕಲೆ ನೃತ್ಯ ಗಾಯನ ಸಂಭಾಷಣೆ ಬಳಸುವ ಪರಿಶುದ್ಧ ಕನ್ನಡ ಭಾಷೆ ಭಾಷೆಯ ಮೇಲಿನ ಹಿಡಿತ ಕಲಾವಿದರಲ್ಲಿ ಚಿತ್ತವನ್ನು ಜ್ಞಾನಾರ್ಜನೆಯ ಕಡೆಗೆ ಒಯ್ಯುತ್ತಿದೆ. ಕಲಾವಿದರು ವಿವಿಧ ವೃತ್ತಿರಂಗಗಳಲ್ಲಿ ಪಳಗಿದ್ದರು ಪ್ರವೃತ್ತಿಯಾಗಿ ಯಕ್ಷಗಾನವನ್ನು ಬೆಳೆಸುವ ನಿಟ್ಟಿನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಯಕ್ಷಗಾನ ಸಂಸ್ಕಾರಯುತ ಶಿಕ್ಷಣವನ್ನ ಬದುಕಿಗೆ ನೀಡಿ ದಾರಿದೀಪವೆನಿಸಿದೆ ಪುರಾಣದ ಮಾಹಿತಿ ಕಥೆ ನೀತಿ ಪಾಠ ಅಗಾಧ ಜ್ಞಾನ ಭಂಡಾರ ವನ್ನು ಬಳಸಿಕೊಂಡು ವಿಸ್ತಾರವಾಗಿ ಬೆಳೆದಿದೆ ಎಂದರು.
ಯಕ್ಷದ್ರುವ ಪಟ್ಲ ಫೌಂಡೇಶನ್ ನ ಕಟೀಲು – ಎಕ್ಕಾರು ಘಟಕದ ಅಧ್ಯಕ್ಷ ಗಿರೀಶ್ ಶೆಟ್ಟಿ ಕಟೀಲು ಇವರು ದೀಪ ಬೆಳಗಿಸಿ ಯಕ್ಷ ಶಿಕ್ಷಣವನ್ನು ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಮತ್ತು ಶಿಸ್ತನ್ನು ಬೆಳೆಸುತ್ತದೆ. ಇಂದು ಪಠ್ಯ ಪೂರಕವಾಗಿ ಗುಣಾತ್ಮಕ ಮೌಲ್ಯಾಧಾರಿತ ಶಿಕ್ಷಣ ಒದಗಿಸುವಲ್ಲಿ ಬದುಕಿಗೆ ವಿಶೇಷ ವಿಚಾರಧಾರೆಯನ್ನು ಒದಗಿಸಿಕೊಡುವಲ್ಲಿ ಪೂರಕವಾಗಿದೆ ಎಂದರು.
ಯಕ್ಷದ್ರುವ ಪಟ್ಲ ಫೌಂಡೇಶನ್ ನ ಗೌರವ ಸಲಹೆಗಾರ ರತ್ನಾಕರ ಶೆಟ್ಟಿ, ಸಂಚಾಲಕ ನಿತೇಶ್ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಉಪಾಧ್ಯಕ್ಷ ರಿತೇಶ್ ಶೆಟ್ಟಿ, ಯಕ್ಷಗಾನದ ಶಿಕ್ಷಕ ರಾಮ ಪ್ರಕಾಶ್ ಕಲ್ಲೂರಾಯ, ಸದಸ್ಯರಾದ ಯಶೋಧರ , ಪ್ರವೀಣ ದೇವಾಡಿಗ ಶಾಲಾ ಮುಖ್ಯ ಶಿಕ್ಷಕಿ ಇಂದಿರಾ ಎನ್ ರಾವ್ ,ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಶಿಕ್ಷಕ ಡಾ.ಅನಿತ್ ಕುಮಾರ್ ಸ್ವಾಗತಿಸಿದರು. ಚಿತ್ರಶ್ರೀ ಕಾರ್ಯಕ್ರಮ ನಿರೂಪಿಸಿದರು.

