ಬಾಂಗ್ಲಾ ದೇಶದಲ್ಲಿ ಅಲ್ಪಸಂಖ್ಯಾಕ ಹಿಂದುಗಳ ಮೇಲೆ ನಡೀತಾ ಇರುವ ಭೀಕರ ಕ್ರೌರ್ಯದ ಸರಣಿ ಕಂಡು ತೀವ್ರ ಆಘಾತವಾಗುತ್ತಿದೆ. ಕೇಂದ್ರ ಸರ್ಕಾರ ಕಿಂಚಿತ್ತೂ ತಡಮಾಡದೇ ಈ ಸಂಬಂಧ ಕಾರ್ಯಪ್ರವೃತ್ತರಾಗಿ ಈ ಭೀಭಿತ್ಸ ಕೃತ್ಯಗಳನ್ನು ನಿಲ್ಲಿಸಲು ಕ್ರಮವಹಿಸಬೇಕು ಎಂದು ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಜಗತ್ತಿನ ಸಮಸ್ತರ ಒಳಿತಿಗಾಗಿ ಹಿಂದು ಸಮಾಜ ನಿರಂತರ ಸ್ಪಂದಿಸಿದೆ. ತಾನೇ ತಾನಾಗಿ ಇನ್ನೊಬ್ಬರ ಮೇಲೆ ಪಾರಮ್ಯ ಸಾಧಿಸಲು ಹಿಂಸೆಯನ್ನು ಹಿಂದು ಸಮಾಜ ಯಾವತ್ತೂ ಅಸ್ತ್ರವಾಗಿ ಮಾಡಿಕೊಂಡದ್ದೇ ಇಲ್ಲ . ಶಾಂತಿ ಸಹಬಾಳ್ವೆಯ ತತ್ವಗಳನ್ನು ನಮ್ಮ ಎಲ್ಲೆ ಮೀರಿ ಅನುಷ್ಠಾನಿಸಿದ್ದೇವೆ . ಆದರೆ ನಮ್ಮದೇ ನೆರೆಯ ದೇಶವೊಂದರಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ಪೈಶಾಚಿಕ ಹಾಗೂ ಅಮಾನವೀಯ ಧಾಳಿಗಳು ಹಿಂಸೆ , ಕೊಲೆ ಅತ್ಯಾಚಾರಗಳನ್ನು ಕಂಡು ಭಾರತದ ಹಿಂದುಗಳು ತೀವ್ರ ದುಃಖಿತರಾಗಿದ್ದಾರೆ. ಆದ್ದರಿಂದ ಕೇಂದ್ರ ಸರ್ಕಾರ ತಕ್ಷಣ ಸಾಧ್ಯವಿರುವ ಎಲ್ಲ ರಾಜತಾಂತ್ರಿಕ ಕ್ರಮಗಳನ್ನು ಕೈಗೊಂಡು ಬಾಂಗ್ಲಾದಲ್ಲಿ ಹಿಂದುಗಳ ರಕ್ಷಣೆ ನೆಮ್ಮದಿಗೆ ಸೂಕ್ತ ವ್ಯವಸ್ಥೆಯಾಗುವಂತೆ ನೋಡಿಕೊಳ್ಳಬೇಕೆಂದು ವಿಶ್ವಹಿಂದು ಪರಿಷತ್ತಿನ ಕೇಂದ್ರೀಯ ಮಂಡಳಿ ಸದಸ್ಯರೂ ಆಗಿರುವ ಶ್ರೀಗಳು ಒತ್ತಾಯಿಸಿದ್ದಾರೆ.
ಜನವರಿ 10 ಕ್ಕೆ ದೀಪ ಬೆಳಗಿಸಿ ಪ್ರಾರ್ಥಿಸಿ : ಬಾಂಗ್ಲಾದಲ್ಲಿ ಹಿಂದುಗಳ ಮೇಲಿನ ಮಾರಣಾಂತಿಕ ದೌರ್ಜನ್ಯಗಳ ಅಂತ್ಯ , ಘಟನೆಗಳಲ್ಲಿ ಮೃತರಾದವರಿಗೆ ಸದ್ಗತಿ ಹಾಗೂ ಸಂತ್ರಸ್ತ ಹಿಂದುಗಳಿಗೆ ಶೀಘ್ರ ರಕ್ಷಣೆ ಮತ್ತು ಇಡೀ ಜಗತ್ತಿನಲ್ಲಿ ಶಾಂತಿ ನೆಮ್ಮದಿ ನೆಲೆಸುವಂತೆ ಪ್ರಾರ್ಥಿಸಿ ಇದೇ ಬರುವ ಜನವರಿ 10 ಶನಿವಾರದಂದು ದೇಶದ ಪ್ರತೀ ಹಿಂದುಗಳು ತಮ್ಮ ಮನೆ ಮಠ ಮಂದಿರಗಳಲ್ಲಿ ದೇವರಿಗೆ ನಿತ್ಯ ಬೆಳಗುವ ದೀಪದ ಜೊತೆಗೆ ಪ್ರತ್ಯೇಕ ದೀಪ ಒಂದನ್ನು ಬೆಳಗಿ ಪ್ರಾರ್ಥಿಸುವಂತೆ ಶ್ರೀಗಳು ಕರೆ ನೀಡಿದ್ದಾರೆ.
