ಮಂಗಳೂರು: ನಗರದ ಮಂಗಳಾದೇವಿ ಸಮೀಪದಲ್ಲಿರುವ ಶ್ರೀ ರಾಮಕೃಷ್ಣಮಠದಲ್ಲಿ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿಯವರ ಮಾರ್ಗದರ್ಶನದಲ್ಲಿ ಎರಡು ವಾರಗಳ ಕಾಲ ಜರುಗಿದ ಯೋಗ ಶಿಬಿರ ಸಮರೋಪಗೊಂಡಿತು.
ಬಳಿಕ ರಾಮಕೃಷ್ಣ ಮಠ, ಮಂಗಳೂರು ಇಲ್ಲಿಯ ಬಾಲಕಾಶ್ರಮದ ವಾರ್ಡನ್ ಆಗಿರುವ ಸ್ವಾಮಿ ಯುಗೇಶಾನಂದಜೀ ಆಶೀರ್ವಚನದಲ್ಲಿ ಯೋಗ ವಿಜ್ಞಾನ ಎಂಬುದು ಸಾವಿರಾರು ವರ್ಷಗಳ ಹಳೆಯದು. ವೈದಿಕ ಕಾಲದಿಂದಲೂ ಭಾರತದಲ್ಲಿ ಯೋಗವನ್ನು ಪರಿಚಯಿಸಲಾಗಿದೆ. ಇದು ಹಲವಾರು ವರ್ಷಗಳಿಂದ ಭಾರತೀಯರ ಜೀವನಶೈಲಿಯ ಒಂದು ಭಾಗವಾಗಿ ಉಳಿದಿದೆ. ಯೋಗವು ಭಾರತೀಯ ಸಂಸ್ಕೃತಿ ಮತ್ತು ನಾಗರಿಕತೆಯ ಒಂದು ಪ್ರಮುಖ ಭಾಗವಾಗಿದೆ. ಇದರಲ್ಲಿ ಮಾನವೀಯತೆ ಮತ್ತು ಆಧ್ಯಾತ್ಮಿಕ ಉನ್ನತಿಯ ಭೌತಿಕ ಅಂಶಗಳ ಗುಣಲಕ್ಷಣಗಳಿವೆ. ಪತಂಜಲಿ ಋಷಿಯವರು ತಮ್ಮ ಯೋಗ ಶಾಸ್ತçದಲ್ಲಿ ಅಷ್ಟಾಂಗ ಯೋಗದ (ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣಾ ಧ್ಯಾನ ಮತ್ತು ಸಮಾಧಿ) ತಿಳಿಸಿರುತ್ತಾರೆ. ಇಲ್ಲಿ ಯೋಗದ ಪ್ರಥಮ ಮೆಟ್ಟಿಲು, ದ್ವಿತೀಯ ಮೆಟ್ಟಿಲುಗಳಾದ ಯಮ, ನಿಯಮದ ಬಗ್ಗೆ ಅರಿತು, ತಿಳಿದು ವ್ಯಕ್ತಿ ತನ್ನ ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ಆಸನ ಕಲಿಯಲು ಸುಲಭವಾಗುತ್ತದೆ. ಯಮ, ನಿಯಮವನ್ನು ಪಾಲಿಸಿಯೇ ಯೋಗಾಸನಗಳನ್ನು ಕಲಿಯಬೇಕು ಎಂದು ತಿಳಿಸಿದರು.
ದೇಲಂಪಾಡಿಯವರು ಯೋಗದ ಮಹತ್ವವನ್ನು ತಿಳಿಸಿದರು. ಯೋಗವು ಪ್ರಾಚೀನದಿಂದಲೂ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸವಾಗಿದ್ದು, ಜನರಿಗೆ ಶಾಂತತೆ, ಶಾಂತಿ, ಆತ್ಮವಿಶ್ವಾಸ ಮತ್ತು ಧೈರ್ಯವನ್ನು ನೀಡುತ್ತದೆ. ಅದರ ಮೂಲಕ ಅವರು ಹಲವಾರು ಚಟುವಟಿಕೆಗಳನ್ನು ಉತ್ತಮ ರೀತಿಯಲ್ಲಿ ಮಾಡಬಹುದು. ಇಲ್ಲಿ ನಿತ್ಯ ಯೋಗಾಸಾನ ಅಭ್ಯಾಸ ಮಾಡಿದಾಗ ಎಲ್ಲಾ ಅಂಗಾಗಗಳಿಗೆ ಉತ್ತಮ ವ್ಯಾಯಾಮ ದೊರಕಿ, ರಕ್ತಪರಿಚಲನೆ ಸುಗಮವಾಗಿ ಜರುಗಿ, ನರಮಂಡಲ ಸಚೇತನಗೊಳ್ಳುತ್ತದೆ. ದೇಹದ ಪ್ರತಿಯೊಂದು ಅಂಗವೂ ಸ್ಪೂರ್ತಿಯುತವೂ ಹಗುರವೂ ಆಗ ಆರೋಗ್ಯವೂ ಹೆಚ್ಚುತ್ತದೆ ಎಂದು ತಿಳಿಸಿದರು.
ದೇಲಂಪಾಡಿ ಶಿಷ್ಯರಾದ ಸುಮಾ, ಕಾರ್ತಿಕ್, ಚಂದ್ರಹಾಸ ಬಾಳ ಹಾಗೂ ಹರಿಣಿ ಇವರು ಸಹಕರಿಸಿದರು. ಈ ಸಂದರ್ಭದಲ್ಲಿ ಯೋಗ ಗುರು ದೇಲಂಪಾಡಿಯವರಿಗೆ ಗುರುವಂದನೆ ಸಲ್ಲಿಸಲಾಯಿತು.

