Tuesday, May 13, 2025
HomeUncategorized“ವತ್ಸಲೆ” ಕೃತಿ ಬಿಡುಗಡೆ

“ವತ್ಸಲೆ” ಕೃತಿ ಬಿಡುಗಡೆ


“ವಾತ್ಸಲ್ಯ” ನಿವಾಸಿಗಳ ಸಂತೃಪ್ತ ಜೀವನ ನಮಗೆ ಹೆಚ್ಚಿನ ಸಂತೋಷ ಮತ್ತು ತೃಪ್ತಿ ನೀಡಿದೆ.
ಉಜಿರೆ: “ವಾತ್ಸಲ್ಯ” ಮನೆ ನಿವಾಸಿಗಳ ಸಂತೃಪ್ತ ಮತ್ತು ನೆಮ್ಮದಿಯ ಜೀವನ ನಮಗೆ ಹೆಚ್ಚಿನ ಸಂತೋಷ ಮತ್ತು ತೃಪ್ತಿಯನ್ನು  ನೀಡಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಅವರು ಬುಧವಾರ ಧರ್ಮಸ್ಥಳದಲ್ಲಿ ಬೀಡಿನಲ್ಲಿ ನಡೆದ ಸರಳ ಸಮಾರಂಭದಲ್ಲಿ ಪೂಜಾ ಪ್ರಶಾಂತ್ ಶೆಟ್ಟಿ ರಚಿಸಿದ “ವತ್ಸಲೆ” ಕೃತಿಯನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ತಾವು ಇತ್ತೀಚೆಗೆ ಮೈಸೂರಿನಲ್ಲಿ “ವಾತ್ಸಲ್ಯ” ಮನೆಗೆ ಭೇಟಿ ನೀಡಿ ಪುಟ್ಟ ಮನೆಯಲ್ಲಿ ಎಲ್ಲಾ ಮೂಲಭೂತ ಸೌಲಭ್ಯಗಳಿದ್ದು ನಿವಾಸಿಗಳ ಸಂತೃಪ್ತ ಜೀವನ ಕಂಡು ತಮಗೆ ಅತೀವ ಸಂತೋಷ ಮತ್ತು ತೃಪ್ತಿ ಉಂಟಾಯಿತು ಎಂದು ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತಪಡಿಸಿದರು.
ಮಹಿಳಾ ಸಬಲೀಕರಣದ ರೂವಾರಿ ಹೇಮಾವತಿ ವೀ. ಹೆಗ್ಗಡೆಯವರ ಕನಸಿನ ಕೂಸು “ವಾತ್ಸಲ್ಯ” ಯೋಜನೆ. ಬದುಕಿನುದ್ದಕ್ಕೂ ಶ್ರಮ ಜೀವನ ಮಾಡಿ ಹೋರಾಡಿ ಬಳಲಿ ಬೆಂಡಾದ ಹಿರಿಯ ಜೀವಗಳಿಗೆ ಅಂತಿಮ ದಿನಗಳಲ್ಲಿ ಗೌರವದ, ನೆಮ್ಮದಿಯ ಸಂತೃಪ್ತ ಜೀವನ ಮಾಡಲು ಸೂರನ್ನು ಕಟ್ಟಿ ಕೊಡುವ ಕಾರ್ಯಕ್ರಮವೇ “ವಾತ್ಸಲ್ಯ”. ರಾಜ್ಯದೆಲ್ಲೆಡೆ ಈಗಾಗಲೆ ೬೧೦ ಮನೆಗಳನ್ನು ಈ ಯೋಜನೆಯಡಿ ನಿರ್ಮಿಸಿದ್ದು ಬಡವರ ಪಾಲಿಗೆ ಆಶಾಜ್ಯೋತಿಯಾಗಿ, “ನಂದಾದೀಪ”ವಾಗಿ ಬೆಳಗುತ್ತಿವೆ.
ಲೇಖಕಿ ಪೂಜಾಪ್ರಶಾಂತ್ ಶೆಟ್ಟಿ ಫಲಾನುಭವಿಗಳ ಅನುಭವ, ಅನಿಸಿಕೆಗಳನ್ನು ಹೃದಯಸ್ಪರ್ಶಿಯಾಗಿ ಕಥೆಗಳ ಮೂಲಕ ಸಾದರಪಡಿಸಿದ್ದಾರೆ. ಇವರಿಗೆ ಸಂದೀಪ್ ದೇವ್ ಸಹಕರಿಸಿರುತ್ತಾರೆ.
ಹೇಮಾವತಿ ವೀ. ಹೆಗ್ಗಡೆಯವರು ಮಾತನಾಡಿ “ವಾತ್ಸಲ್ಯ” ಯೋಜನೆಯ ಅನುಷ್ಠಾನದಲ್ಲಿ ಗ್ರಾಮಾಭಿವೃದ್ಧಿ  ಯೋಜನೆಯ ಕಾರ್ಯಕರ್ತರ ನಿಷ್ಠೆ, ಕಾಳಜಿ ಹಾಗೂ ಶ್ರಮವನ್ನು ಶ್ಲಾಘಿಸಿ ಅಭಿನಂದಿಸಿದರು. ಇದು ತಮಗೆ ಅತ್ಯಂತ ಆಪ್ತವಾದ ಕಾರ್ಯಕ್ರಮವಾಗಿದ್ದು “ವಾತ್ಸಲ್ಯ” ನಿವಾಸಿಗಳ ಪ್ರೀತಿ, ವಿಶ್ವಾಸ ಹಾಗೂ ಗೌರವ ತಿಳಿದು  ನಮಗೆ ಸಂತೋಷವಾಗಿದೆ. ತಮ್ಮನ್ನೂ ಪ್ರೀತಿಸುವವರು “ಅಭಯ” ನೀಡುವವರೂ ಇದ್ದಾರೆ ಎಂಬ ವಿಶ್ವಾಸದಿಂದ ಅವರು ಇಂದು ಸಂತೃಪ್ತ ಜೀವನ ನಡೆಸುತ್ತಿದ್ದಾರೆ ಎಂದು ಹೇಳಿದರು.
ಲೇಖಕಿ ಪೂಜಾ ಪ್ರಶಾಂತ್ ಶೆಟ್ಟಿ ಅವರನ್ನು ಹೇಮಾವತಿ ವೀ. ಹೆಗ್ಗಡೆಯವರು ಸನ್ಮಾನಿಸಿ ಅಭಿನಂದಿಸಿದರು.
ಡಿ. ಸುರೇಂದ್ರ ಕುಮಾರ್, ಅನಿತಾಸುರೇಂದ್ರ ಕುಮಾರ್, ಸೋನಿಯಾಯಶೋವರ್ಮ, ಅಮಿತ್, ಶ್ರದ್ಧಾಅಮಿತ್, ಡಿ. ಹರ್ಷೇಂದ್ರ ಕುಮಾರ್, ಡಿ. ಶ್ರೇಯಸ್ ಕುಮಾರ್, ನಿಶ್ಚಲ್ ಕುಮಾರ್, ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ಅಧಿಕಾರಿ ಅನಿಲ್ ಕುಮಾರ್ ಎಸ್.ಎಸ್. ಪ್ರಾದೇಶಿಕ ಹಣಕಾಸು ನಿರ್ದೇಶಕರು ಶಾಂತಾರಾಮ ಪೈ, ಕೇಂದ್ರ ಕಚೇರಿಯ ಪ್ರಾದೇಶಿಕ ನಿರ್ದೇಶಕರು, ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular