ಪರಿಶ್ರಮ ಇದ್ದರಷ್ಟೇ ಯಶಸ್ಸು ಸಿಗುತ್ತದೆ ಎಂದು ಆಂಧ್ರಪ್ರದೇಶದ ರಾಜ್ಯಪಾಲರಾದ ಮೂಡುಬಿದರೆ ಎಸ್.ಅಬ್ದುಲ್ ನಝೀರ್ ಹೇಳಿದರು. ಅವರು ಮೂಡುಬಿದಿರೆ ಶ್ರೀ ಮಹಾವೀರ ಕಾಲೇಜಿನ ವಜ್ರಮಹೋತ್ಸವ ಸಂಭ್ರಮಾಚರಣೆ ಹಾಗೂ ಸಂಸ್ಥಾಪಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.ಕಾಲೇಜಿನ ಸಂಸ್ಥಾಪಕರಾಗಿದ್ದ ಡಾ.ಟಿಎಂಎ ಪೈ ಅವರ ಮಾರ್ಗದರ್ಶಿತ್ವದಲ್ಲಿ ಸಂಸ್ಥೆ ಬಹಳಷ್ಟು ಎತ್ತರಕ್ಕೆ ಏರಿದೆ.

ಈ ಸಂಸ್ಥೆಯನ್ನು ಡೀಮ್ಡ್ ವಿವಿಯನ್ನಾಗಿಸುವ ಯೋಜನೆಯೂ ಆಡಳಿತ ಮಂಡಳಿಗಿದೆ. ಗ್ರಾಮೀಣ ಭಾಗದ ಜನರಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆಯುವ ಬಗ್ಗೆ ಗಮನಹರಿಸಬೇಕು. ಹಿರಿಯರ ಜೀವನಾದರ್ಶಗಳನ್ನು ಯುವಸಮುದಾಯ ಅರಿತುಕೊಳ್ಳಬೇಕು ಎಂದರು.
ಮಾಹೆ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಮಾತನಾಡಿ, ಶಿಕ್ಷಣ ಹಾಗೂ ಆರೋಗ್ಯ ಸೇವೆಗೆ ವಿಶೇಷ ಒತ್ತು ನೀಡುವ ಪರಿಕಲ್ಪನೆಯಡಿ ಸಂಸ್ಥಾಪಕರಾದ ಡಾ.ಟಿಎಂಎ ಪೈ ಅವರು ಈ ಸಂಸ್ಥೆಯ ಆರಂಭಕ್ಕೆ ಕೈಜೋಡಿಸಿದ್ದಾರೆ. ಸಂಸ್ಥೆಯ ಏಳಿಗೆಗೆ ಮಾಜಿ ಸಚಿವ ಅಭಯಚಂದ್ರ ಜೈನ್ ಅವರ ಕೊಡುಗೆಯೂ ಅತ್ಯಮೂಲ್ಯವಾಗಿದೆ. ಅನಕ್ಷರತೆ ನಿವಾರಣೆಯಾದರೆ ಮಾತ್ರ ಬಡತನ ನಿವಾರಣೆಯಾಗಲು ಸಾಧ್ಯವಿದೆ. ಮಕ್ಕಳು ಕಲಿತು ಉದ್ಯೋಗ ಸಿಗಬೇಕು ಎಂಬ ನಿಟ್ಟಿನಲ್ಲಿ ಶಿಕ್ಷಣ ಒದಗಿಸಲಾಗುತ್ತಿದೆ ಎಂದರು.
ಮಾಜಿ ಸಚಿವ ಹಾಗೂ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಕೆ.ಅಭಯಚಂದ್ರ ಜೈನ್, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿದ್ಯಾಸಂಸ್ಥೆಗಳ ಉಪಾಧ್ಯಕ್ಷ ಡಿ.ಸುರೇಂದ್ರ ಕುಮಾರ್, ಸಾಮಾಜಿಕ ಹಾಗೂ ಧಾರ್ಮಿಕ ಚಿಂತಕಿ ಅನಿತಾ ಸುರೇಂದ್ರ ಕುಮಾರ್, ಆಳ್ವಾಸ್ ಎಜುಕೇಶನ್ ಫೌಂಡೇಶನ್ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ, ಉದ್ಯಮಿ ಮನೋಹರ್ ಎಸ್.ಮೂಡುಬಿದಿರೆ, ಅದಾನಿ ಗ್ರೂಪ್ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಅಧ್ಯಕ್ಷ ಕಿಶೋರ್ ಆಳ್ವ ಉಪಸ್ಥಿತರಿದ್ದರು.
ರಾಜ್ಯಪಾಲರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಸಂಪತ್ ಸಾಮ್ರಾಜ್ಯ ಸ್ವಾಗತಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ.ರಾಧಾಕೃಷ್ಣ ವಂದಿಸಿದರು. ಉಪನ್ಯಾಸಕಿ ಚೈತ್ರಾ ನಿರೂಪಿಸಿದರು.
ವರದಿ ರಾಯಿ ರಾಜ ಕುಮಾರ

