ಮಂಗಳೂರು: ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ತೀವ್ರ ಸ್ವರೂಪದ ವಾಯುಭಾರ ಕುಸಿತ (Cyclonic Circulation) ಈಗ ಇಡೀ ಕರ್ನಾಟಕವನ್ನು ಆವರಿಸಿಕೊಳ್ಳಲು ಸನ್ನದ್ಧವಾಗಿದೆ. ಬಿರುಗಾಳಿಯೊಂದಿಗೆ ಭಾರೀ ಮಳೆ ಅಪ್ಪಳಿಸಲಿದೆ. ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ತಾಜಾ ವರದಿಯ ಪ್ರಕಾರ, ಕರ್ನಾಟಕದ ಒಟ್ಟು 30 ಜಿಲ್ಲೆಗಳಿಗೂ ಬೇರೆ ಬೇರೆ ಹಂತದ ಅಲರ್ಟ್ ಘೋಷಣೆ ಮಾಡಲಾಗಿದೆ! ಮುಂದಿನ 7 ದಿನಗಳ ಕಾಲ ರಾಜ್ಯದ ಜನತೆ ಆಕಾಶದತ್ತ ಕಣ್ಣಿಡಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಹವಾಮಾನ ಇಲಾಖೆಯ ವಿಜ್ಞಾನಿಗಳ ಪ್ರಕಾರ, ಪೂರ್ವ-ಮಧ್ಯ ಅರಬ್ಬಿ ಸಮುದ್ರ ಮತ್ತು ಕರಾವಳಿ ಕರ್ನಾಟಕದ ತೀರ ಪ್ರದೇಶದಲ್ಲಿ ಸಮುದ್ರ ಮಟ್ಟದಿಂದ ಸುಮಾರು 3.1 ಕಿ.ಮೀ ನಿಂದ 4.5 ಕಿ.ಮೀ ಎತ್ತರದಲ್ಲಿ ಬಲಿಷ್ಠವಾದ ಸೈಕ್ಲೋನಿಕ್ ಸರ್ಕ್ಯುಲೇಷನ್ (ಸುಳಿಮಳೆ ಮಾರುತಗಳು) ಕೇಂದ್ರೀಕೃತವಾಗಿದೆ. ಇದರ ಎಫೆಕ್ಟ್ನಿಂದಾಗಿ ಅರಬ್ಬಿ ಸಮುದ್ರದ ತೇವಾಂಶವೆಲ್ಲವೂ ಕರ್ನಾಟಕದ ಭೂಭಾಗಕ್ಕೆ ನುಗ್ಗುತ್ತಿದ್ದು, ಮಳೆಯ ಆರ್ಭಟಕ್ಕೆ ಮುನ್ನುಡಿ ಬರೆದಿದೆ. ಒಂದೆಡೆ ವಾಯುಭಾರ ಕುಸಿತ ಅಬ್ಬರಿಸುತ್ತಿದ್ದರೆ, ಇನ್ನೊಂದೆಡೆ ನೈಋತ್ಯ ಮುಂಗಾರು ಕೇರಳದ ಹೊಸ್ತಿಲಿಗೆ ಬಂದು ನಿಂತಿದೆ. ಜೂನ್ 4 ರಂದು ಮುಂಗಾರು ಅಧಿಕೃತವಾಗಿ ಕೇರಳ ಪ್ರವೇಶಿಸಲಿದ್ದು, ವಾಯುಭಾರ ಕುಸಿತದ ಪ್ರಭಾವದಿಂದಾಗಿ ಈ ಬಾರಿ ಕರ್ನಾಟಕಕ್ಕೆ ಮುಂಗಾರು ಮಳೆ ತೀವ್ರವಾಗಿ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞ ಡಾ. ಎನ್. ಪುವಿಯರಸನ್ ತಿಳಿಸಿದ್ದಾರೆ.

