ಅಬುಧಾಬಿಯ ಬಿಎಪಿಎಸ್ ಹಿಂದೂ ಮಂದಿರಕ್ಕೆ ಪ್ರತಿಷ್ಠಿತ ‘ಟಾಲರೆನ್ಸ್​ ಪ್ರಶಸ್ತಿ

0
27

ಅಬುಧಾಬಿ: ಯುಎಇ (UAE) ರಾಜಧಾನಿ ಅಬುಧಾಬಿಯಲ್ಲಿರುವ ಪ್ರಸಿದ್ಧ ಬಿಎಪಿಎಸ್ ಹಿಂದೂ ಮಂದಿರಕ್ಕೆ ಅಂತಾರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ “ ಟಾಲರೆನ್ಸ್​ ಪ್ರಶಸ್ತಿ 2026” (Tolerance Award 2026) ಒಲಿದು ಬಂದಿದೆ. ಜಾಗತಿಕವಾಗಿ ಸೌಹಾರ್ದತೆ, ಪರಸ್ಪರ ಗೌರವ ಮತ್ತು ಶಾಂತಿಯುತ ಸಹಬಾಳ್ವೆಯನ್ನು ಉತ್ತೇಜಿಸುವಲ್ಲಿ ಮಂದಿರ ನೀಡುತ್ತಿರುವ ಮಹತ್ತರ ಕೊಡುಗೆಯನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ.

ಇತ್ತೀಚೆಗೆ ನಡೆದ ‘ಥರ್ಡ್​ ಇಂಟರ್​ನ್ಯಾಷನಲ್ ಡೈಲಾಗ್ ಆಫ್ ಸಿಲಿಲೈಸೇಷನ್ ಆ್ಯಂಡ್ ಟಾಲರೆನ್ಸ್​ ಕಾನ್ಫರೆನ್ಸ್​(IDCT 2026)ನಲ್ಲಿ ಈ ಪ್ರಶಸ್ತಿಯನ್ನು ಅಧಿಕೃತವಾಗಿ ಪ್ರಕಟಿಸಲಾಯಿತು. ಅಬುಧಾಬಿಯ ಈ ಹಿಂದೂ ಮಂದಿರವು ಕೇವಲ ಒಂದು ಪ್ರಾರ್ಥನಾ ಮಂದಿರವಾಗಿ ಉಳಿಯದೆ, ಗಲ್ಫ್ ರಾಷ್ಟ್ರಗಳಲ್ಲಿ ಜಾಗತಿಕ ಏಕತೆಯ ಸಂಕೇತವಾಗಿ ಹೊರಹೊಮ್ಮಿದೆ.

ಮಂದಿರವು ಆಯೋಜಿಸುವ ‘ಫೆಸ್ಟಿವಲ್ ಆಫ್ ಹಾರ್ಮೋನಿ’, ‘ಓಮ್ಸಿಯಾತ್’ ನಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ವಿವಿಧ ಧರ್ಮ ಮತ್ತು ಸಂಸ್ಕೃತಿಯ ಜನರನ್ನು ಒಟ್ಟಿಗೆ ತರುತ್ತಿವೆ. ಸಂಕಷ್ಟದ ಸಮಯದಲ್ಲಿ ಮತ್ತು ಜಾಗತಿಕ ಬಿಕ್ಕಟ್ಟುಗಳ ಸಂದರ್ಭದಲ್ಲಿ ಮಂದಿರವು ಹಮ್ಮಿಕೊಳ್ಳುವ ಜನಪದ ಕಾರುಣ್ಯದ ಸೇವೆಗಳು ಜಾಗತಿಕ ಮಟ್ಟದಲ್ಲಿ ಶ್ಲಾಘನೆಗೆ ಪಾತ್ರವಾಗಿವೆ.

ಮಂದಿರದ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಬ್ರಹ್ಮವಿಹಾರಿ ಸ್ವಾಮೀಜಿ ಅವರು ಭವಿಷ್ಯದ ಕುಟುಂಬ, ಧರ್ಮ ಮತ್ತು ತಂತ್ರಜ್ಞಾನದ ಕುರಿತು ಅತ್ಯಂತ ಪ್ರಬುದ್ಧವಾದ ಸಂದೇಶ ನೀಡಿದರು.

ಕೃತಕ ಬುದ್ಧಿಮತ್ತೆ ವೇಗವಾಗಿ ಬೆಳೆಯುತ್ತಿರುವ ಇಂದಿನ ದಿನಗಳಲ್ಲಿ, ಮನುಷ್ಯ ತನ್ನ ನೈತಿಕ ಮೌಲ್ಯಗಳು ಮತ್ತು ಕೌಟುಂಬಿಕ ಬಾಂಧವ್ಯಗಳನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳಬೇಕು. ಪ್ರತಿ ಕುಟುಂಬವೂ ದಿನದ ಕೆಲವು ಸಮಯವನ್ನು ಮೊಬೈಲ್, ಇಂಟರ್ನೆಟ್‌ನಂತಹ ಡಿಜಿಟಲ್ ಆಕರ್ಷಣೆಗಳಿಂದ ದೂರವಿಟ್ಟು, ಒಟ್ಟಿಗೆ ಕುಳಿತು ಪ್ರಾರ್ಥನೆ ಮತ್ತು ಪರಸ್ಪರ ಪ್ರೀತಿಯ ಸಂಭಾಷಣೆಯಲ್ಲಿ ಕಳೆಯಬೇಕು (ಘರ್ ಸಭಾ). ನಮಗೆ ಕೇವಲ ತಂತ್ರಜ್ಞಾನ ತುಂಬಿದ ಕುಟುಂಬಗಳಿಗಿಂತ, ಸಂಸ್ಕಾರ ಮತ್ತು ಮೌಲ್ಯಗಳು ತುಂಬಿದ ಕುಟುಂಬಗಳ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು.

ಮಹಂತ್ ಸ್ವಾಮಿ ಮಹಾರಾಜ್ ಅವರ ದಿವ್ಯ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಬಿಎಪಿಎಸ್ ಮಂದಿರಕ್ಕೆ ಸಿಕ್ಕಿರುವ ಈ ಗೌರವವು, ವಿಶ್ವ ಶಾಂತಿ, ಕರುಣೆ ಮತ್ತು ಮಾನವೀಯ ಸಹೋದರತ್ವವನ್ನು ಜಗತ್ತಿನಾದ್ಯಂತ ಪಸರಿಸುವಲ್ಲಿ ಭಾರತೀಯ ಸಂಸ್ಕೃತಿಗೆ ಸಿಕ್ಕ ಮತ್ತೊಂದು ಜಯವಾಗಿದೆ.

LEAVE A REPLY

Please enter your comment!
Please enter your name here