ಉಡುಪಿ: ಸಾರ್ವಜನಿಕರ ಹಿತದೃಷ್ಟಿಯಿಂದ ನಿರಂತರವಾಗಿ ಹೋರಾಟ ನಡೆಸುತ್ತಿದ್ದ ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜೆ ಅವರ ಕಾಳಜಿಗೆ ಸ್ಪಂದಿಸಿ, ಹಾವಂಜೆ ಗ್ರಾಮದ ಕೊಳಲಗೇರಿಯ ಬ್ಯಾಂಕ್ ಆಫ್ ಬರೋಡ ಎದುರುಗಡೆಯಲ್ಲಿರುವ ಬಸ್ ತಂಗುದಾಣವನ್ನು ನವೀಕರಿಸಲು ಉಡುಪಿ ಜಿಲ್ಲೆಯ ಖ್ಯಾತ ಉದ್ಯಮಿ, ಬಡವರ ಬಂಧು ರಾಯಲ್ ಶ್ರೀ ರತ್ನಾಕರ್ ಶೆಟ್ಟಿ ಅವರು ಮುಂದಾಗಿದ್ದಾರೆ.
ದಿವಂಗತ ರಾಘವೇಂದ್ರ ಭಟ್ ಆರೂರು ಅವರ ಸ್ಮರಣಾರ್ಥವಾಗಿ ನಿರ್ಮಾಣಗೊಳ್ಳಲಿರುವ ಈ ನೂತನ ಬಸ್ ತಂಗುದಾಣವು ಹಾವಂಜೆ ಗ್ರಾಮದ ಸಾರ್ವಜನಿಕರು ಹಾಗೂ ಪ್ರತಿದಿನ ಬಸ್ಗಾಗಿ ಕಾಯುವ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವನ್ನು ಕಲ್ಪಿಸಲಿದೆ. ಹಲವು ವರ್ಷಗಳಿಂದ ಈ ಭಾಗದ ಜನರು ಬಸ್ ತಂಗುದಾಣದ ನವೀಕರಣಕ್ಕೆ ಆಗ್ರಹಿಸುತ್ತಿದ್ದು, ಇದೀಗ ಆ ಬೇಡಿಕೆ ಈಡೇರುತ್ತಿರುವುದು ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ.
ಈ ಜನೋಪಯೋಗಿ ಕಾರ್ಯಕ್ಕೆ ಮುಂದಾಗಿರುವ ರತ್ನಾಕರ್ ಶೆಟ್ಟಿ ಹಾಗೂ ಅವರ ಕುಟುಂಬದವರಿಗೆ ದೇವರು ಉತ್ತಮ ಆರೋಗ್ಯ, ಆಯುಷ್ಯ ಮತ್ತು ಸಮೃದ್ಧಿಯನ್ನು ಕರುಣಿಸಲಿ ಎಂದು ಸ್ಥಳೀಯರು ಹಾರೈಸಿದ್ದಾರೆ.
ಅದೇ ರೀತಿ ಈ ಕಾರ್ಯಕ್ಕೆ ಸಹಕಾರ ನೀಡಿದ ಹಾವಂಜೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಹಾಗೂ ಈ ಹಿಂದೆ ಬಸ್ ತಂಗುದಾಣ ನಿರ್ಮಾಣಕ್ಕೆ ನೆರವಾದ ಬ್ಯಾಂಕ್ ಆಫ್ ಬರೋಡ ಕೊಳಲಗೇರಿ ಶಾಖೆಯ ಅಧಿಕಾರಿಗಳಿಗೂ ಹಾವಂಜೆ ಸಾರ್ವಜನಿಕರ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು ಸಲ್ಲಿಸಲಾಗಿದೆ.
ಸಾರ್ವಜನಿಕರ ಬಹುದಿನಗಳ ಕನಸಾಗಿದ್ದ ಬಸ್ ತಂಗುದಾಣ ನವೀಕರಣ ಕಾರ್ಯ ಆರಂಭವಾಗುತ್ತಿರುವುದು ಗ್ರಾಮಾಭಿವೃದ್ಧಿಯತ್ತ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜೆ ತಿಳಿಸಿದ್ದಾರೆ.

