ವ್ಯಕ್ತಿಯೊಬ್ಬ 5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿ ಬಳಿಕ ಆಕೆಯ ದೇಹವನ್ನು ಕಾರ್ಖಾನೆಯಲ್ಲಿ ಬಚ್ಚಿಟ್ಟ ಘಟನೆ ದೆಹಲಿಯ ಬವಾನಾ ಪ್ರದೇಶದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಟೀ ಅಂಗಡಿ ನಡೆಸುತ್ತಿರುವ ಬಾಲಕಿಯ ಪೋಷಕರು, ಸಂಜೆ 5 ಗಂಟೆ ಸುಮಾರಿಗೆ ಆಕೆಯನ್ನು ಕೊನೆಯ ಬಾರಿಗೆ ನೋಡಿದ್ದೇವೆ. ಅವಳನ್ನು ಹುಡುಕಲು ಪ್ರಯತ್ನಿಸಿದ್ದು, ಇಲ್ಲಿಯವರೆಗೆ ಸಿಕ್ಕಿಲ್ಲ ಎಂದು ಪೊಲೀಸರಿಗೆ ದೂರು ನೀಡಿದ್ದರು.
ಈ ಕುರಿತು ಪೊಲೀಸರು ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ಅವುಗಳಲ್ಲಿ ಒಂದರಲ್ಲಿ ಒಬ್ಬ ವ್ಯಕ್ತಿಯೊಂದಿಗೆ ಹುಡುಗಿ ನಡೆದುಕೊಂಡು ಹೋಗುವುದು ಕಾಣಿಸಿದೆ. ಬಾಲಕಿಯ ಪೋಷಕರು ವ್ಯಕ್ತಿಯನ್ನು ಗುರುತಿಸಿ ಆತ ತೋಟನ್ ಎಂದು ಹೇಳಿದ್ದಾರೆ. ಆತನನ್ನು ಬಂಧಿಸಲು ಪೊಲೀಸರು ತೋಟನ್ನ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಹೋಗಿದ್ದರು.
ಆದರೆ, ಅಷ್ಟರಲ್ಲಾಗಲೇ ಆತ ಎಸ್ಕೇಪ್ ಆಗಿದ್ದ. ಆತನ ಬಗ್ಗೆ ಗೊತ್ತಿರುವ ಕೆಲವು ಕಾರ್ಮಿಕರನ್ನು ವಿಚಾರಿಸಿದಾಗ ತೋಟನ್ ನವದೆಹಲಿ ರೈಲು ನಿಲ್ದಾಣದಿಂದ ಹೌರಾಕ್ಕೆ ಪೂರ್ವ ಎಕ್ಸ್ಪ್ರೆಸ್ ಹತ್ತಲು ಹೋಗುತ್ತಿದ್ದನೆಂದು ಪೊಲೀಸರಿಗೆ ತಿಳಿದು ಬಂದಿದೆ ಎಂದು ವರದಿಯಾಗಿದೆ.