ದಕ್ಷಿಣ ಭಾರತದ ಸಪ್ತ ಪುಣ್ಯ ಕ್ಷೇತ್ರಗಳಿಗೆ ಕಾಲ್ನಡಿಗೆಯಲ್ಲಿ ಭೇಟಿ

0
9

472 ಕಿ. ಮೀ. ದೂರದ ಪ್ರಯಾಣದ ಧಾರ್ಮಿಕ ಕ್ಷೇತ್ರಗಳನ್ನು ಪಾದಯಾತ್ರೆ ಮೂಲಕ ಸಂದರ್ಶಿಸಿದ ಹೆಬ್ರಿ ತಾಲೂಕು ವಿಪ್ರ ಬಾಂಧವರು

ಹೆಬ್ರಿ : ಶ್ರೀ ಅನಂತಪದ್ಮನಾಭ ಪಾದಯಾತ್ರಾ ಸಮಿತಿ ಹೆಬ್ರಿ ವತಿಯಿಂದ ತಾಲೂಕಿನ ವಿಪ್ರ ಬಾಂಧವರು 2019 ರಿಂದ ನಿರಂತರವಾಗಿ ಪಾದಯಾತ್ರೆ ನಡೆಸುತ್ತಿದ್ದು 2026 ರಲ್ಲಿ ಏಳು ಕ್ಷೇತ್ರಗಳನ್ನು ಕಾಲ್ನಡಿಗೆಯಲ್ಲಿ ಪೂರೈಸಿ ದೇವರ ದರ್ಶನವನ್ನು ಪಡೆದು ಪುನೀತರಾದರು.ದೇವರ ಅನುಗ್ರಹ, ಉತ್ತಮ ಆರೋಗ್ಯ, ಎಲ್ಲರಿಗೂ ಒಳಿ ತಾಗಲಿ ಎನ್ನುವ ಸದುದ್ದೇಶದಿಂದ ಈ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು. ಉಡುಪಿ ಶ್ರೀ ಕೃಷ್ಣ ಮಠ, ಕುಂಭಾಶಿ ಶ್ರೀ ಹರಿಹರ ಕ್ಷೇತ್ರ, ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ಕ್ಷೇತ್ರ, ಶಂಕರನಾರಾಯಣ ಶ್ರೀ ಕ್ರೋಢ ಶಂಕರನಾರಾಯಣ ಕ್ಷೇತ್ರ, ಕೊಲ್ಲೂರು ಶ್ರೀ ಮೂಕಾಂಬಿಕಾ ಕ್ಷೇತ್ರ, ಗೋಕರ್ಣ ಶ್ರೀ ಮಹಾಬಲೇಶ್ವರ ಕ್ಷೇತ್ರ, ಕುಕ್ಕೆ ಶ್ರೀ ಸುಬ್ರಮಣ್ಯ ಕ್ಷೇತ್ರಗಳಿಗೆ ಭೇಟಿ ನೀಡಲಾಯಿತು.

ಮಧ್ವಾಚಾರ್ಯರ ಜನ್ಮ ಸ್ಥಳ ಪಾಜಕ ಕ್ಷೇತ್ರ ಶ್ರೀ ಅನಂತಪದ್ಮನಾಭ ದೇವಸ್ಥಾನ,ಕುಂಜಾರುಗಿರಿ ಶ್ರೀ ದುರ್ಗಾದೇವಿ ದೇವಸ್ಥಾನ, ಹೆಬ್ರಿ ತಿಂಗಳೆ ಶ್ರೀ ಶ್ರೀನಿವಾಸ ದೇವಸ್ಥಾನಕ್ಕೂ ಪಾದಯಾತ್ರೆ ಮೂಲಕ ಭೇಟಿ ನೀಡಿ ದೇವರ ದರ್ಶನವನ್ನು ಪಡೆದರು. ಹೆಬ್ರಿ ತಾಲೂಕಿನ 60 ಕ್ಕೂ ಹೆಚ್ಚು ವಿಪ್ರ ಬಾಂಧವರು ಈ ಎಲ್ಲಾ ಪಾದಯಾತ್ರೆಗಳಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.ಈ ಎಲ್ಲಾ ಪಾದಯಾತ್ರೆಗಳ ನೇತೃತ್ವವನ್ನು ವಿಷ್ಣುಮೂರ್ತಿ ಆಚಾರ್ಯ ಗಿಲ್ಲಾಳಿ, ಬಲ್ಲಾಡಿ ಚಂದ್ರಶೇಖರ ಭಟ್ ಹಾಗೂ ಹೆಬ್ರಿ ಸುದರ್ಶನ್ ಜೋಯಿಸ್ ವಹಿಸಿದ್ದು ವಿಪ್ರ ಬಾಂಧವರ ಸಹಕಾರದಿಂದ ಪಾದಯಾತ್ರೆಯು ಸಂಪನ್ನಗೊಂಡಿತು.

ಈ ಬಾರಿ ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನದಿಂದ ಕುಕ್ಕೆ ಶ್ರೀ ಸುಬ್ರಮಣ್ಯ ಕ್ಷೇತ್ರಕ್ಕೆ 104 ಕಿ. ಮೀ. ದೂರವನ್ನು ಕಾಲ್ನಡಿಗೆಯಲ್ಲಿ ಪೂರೈಸಿ ಪಾದಯಾತ್ರಿಗಳು ಕೃತಾರ್ಥರಾದರು.ದಾರಿಯುದ್ಧಕ್ಕೂ ವಿವಿಧ ಧಾರ್ಮಿಕ ಕ್ಷೇತ್ರಗಳಾದ ಪೇರಡ್ಕ ಶ್ರೀ ಸದಾಶಿವ ದೇವಸ್ಥಾನ, ಉಪ್ಪಿನಂಗಡಿ ದಕ್ಷಿಣ ಕಾಶಿ ಮಹತೋಭಾರ ಮಹಾಕಾಳಿ ಸಹಸ್ರಲಿಂಗೇಶ್ವರ ದೇವಸ್ಥಾನ,ಆಲಂಕಾರು ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಉಪ್ಪಿನಂಗಡಿ ಶ್ರೀ ರಾಘವೇಂದ್ರ ಮಠಕ್ಕೆ ತೆರಳಿ ದೇವರ ದರ್ಶನ ಪಡೆಯಲಾಯಿತು.

ದಕ್ಷಿಣ ಕಾಶಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಕ್ಷೇತ್ರದಲ್ಲಿರುವ ನೇತ್ರಾವತಿ,ಕುಮಾರಧಾರ, ಗುಪ್ತಗಾಮಿನಿ ನದಿಗಳ ತ್ರಿವೇಣಿ ಸಂಗಮದಲ್ಲಿ ಹಾಗೂ ಕುಕ್ಕೆ ಸುಬ್ರಮಣ್ಯ ಕುಮಾರಧಾರ ನದಿಯಲ್ಲಿ ತೀರ್ಥ ಸ್ನಾನ ಮಾಡಿ ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ಹಾಗೂ ಸಂಪುಟ ನರಸಿಂಹಸ್ವಾಮಿ ಸುಬ್ರಮಣ್ಯ ಮಠಕ್ಕೆ ತೆರಳಿ ದೇವರ ದರ್ಶನ ಪಡೆದರು . ಈ ಪಾದಯಾತ್ರೆಯಲ್ಲಿ ಗಿಲ್ಲಾಳಿ ವಿಷ್ಣುಮೂರ್ತಿ ಆಚಾರ್ಯ, ಬಲ್ಲಾಡಿ ಚಂದ್ರಶೇಖರ ಭಟ್,ಸುದರ್ಶನ್ ಜೋಯಿಸ್ ಹೆಬ್ರಿ,ಗಿಲ್ಲಾಳಿ ವಿದ್ಯಾಲಕ್ಷ್ಮಿ ಆಚಾರ್ಯ, ರಮ್ಯಾ ಭಟ್ ಬಲ್ಲಾಡಿ, ಪ್ರಕಾಶ್ ಭಟ್ ಮುದ್ರಾಡಿ, ಸುಬ್ರಮಣ್ಯ ಆಚಾರ್ಯ ಹೆಬ್ರಿ,ನಿತ್ಯಾನಂದ ಭಟ್ ಹೆಬ್ರಿ, ನರಸಿಂಹ ಹೇರಳೆ ಹೆಬ್ರಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here