ಉಡುಪಿ : ತುಳುವಿನ ಬಗ್ಗೆ ಸಂಭ್ರಮಿಸಿದರೆ ಸಾಲದು ತುಳುವಿನ ಬಗ್ಗೆ ಅಧ್ಯಯನ ಮಾಡಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ ಸಂಯೋಜಕ ಡಾ. ಧನಂಜಯ ಕುಂಬ್ಳೆ ತಿಳಿಸಿದರು.
ತುಳುಕೂಟ ಉಡುಪಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ ಮತ್ತು ಅಜ್ಜರಕಾಡು ಡಾ. ಜಿ.ಶಂಕರ್ ಪ್ರಘಿಮ ದರ್ಜೆ ಮಹಿಳಾ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ, ಕನ್ನಡ ಮತ್ತು ಸಂಸತಿ ಇಲಾಖೆ ಆಶ್ರಯದಲ್ಲಿ ನಡೆದ ತುಳುಮಿನದನ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಮಾತನಾಡಿದರು.
ಕರಾವಳಿಯಲ್ಲಿ ಹಲವು ಭಾಷೆಗಳಿವೆ. ಕನ್ನಡ ನಮ್ಮ ಆಡಳಿತ ಭಾಷೆ ಆದರೂ ತುಳು ಭಾಷೆಗೆ ತನ್ನದೇ ಆದ ಪ್ರಾಧಾನ್ಯತೆ ಇದೆ. ತುಳುನಾಡಿನ ಚರಿತ್ರೆಯ ಪ್ರಕಾರ ನಮ್ಮ ನಾಡನ್ನು ಹಿಂದಿನ ಕಾಲದಲ್ಲಿ ಆಳಿದವರು ಕನ್ನಡದವರು. ಹಾಗಾಗಿ ತುಳು ಭಾಷೆಗೆ ಆಡಳಿತದ ಘನತೆ ಸಿಗಲಿಲ್ಲ. ತುಳುನಾಡಿನ ಪಾಡ್ದನ, ಒಗಟುಗಳು, ಗಾದೆಗಳು ಹಾಗೂ ಜನಪದ ಸಂಸತಿಯನ್ನು ಉಳಿಸಿ ಬೆಳೆಸುವ ಅಗತ್ಯವಿದೆ. ಆ ನಿಟ್ಟಿನಲ್ಲಿ ತುಳುವಿಗೆ ಸಂಶೋಧನ ಕೇಂದ್ರದ ಅಗತ್ಯ ತೆ ಇದೆ. ಈ ನಿಟ್ಟಿನಲ್ಲಿ ಸರ್ಕಾರ ಗಮನಹರಿಸಬೇಕು ಎಂದು ಹೇಳಿದರು.
ತುಳುಕೂಟ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ಅತ್ಲೆಟಿಕ್ ಅಸೋಸಿಯೇಶನ್ಸ್ ಅಧ್ಯಕ್ಷ ಹರಿಪ್ರಸಾದ್ ರೈ ಉದ್ಘಾಟಿಸಿದರು. ಸಮಾಜಸೇವಕಿ ವಿದ್ಯಾಲತಾ ಶೆಟ್ಟಿ, ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಾಧವ ಪೂಜಾರಿ, ಕಾಲೇಜಿನ ಪ್ರಾಚಾರ್ಯ ಸೋಜನ್ ಕೆ.ಜಿ., ತುಳುಕೂಟದ ಕಾರ್ಯದರ್ಶಿ ಗಂಗಾಧರ ಕಿದಿಯೂರು, ತುಳುಮಿನದ ಸಂಚಾಲಕ ದಯಾನಂದ ಡಿ., ವಿ.ಕೆ.ಯಾದವ್, ಪ್ರಭಾಕರ ಭಂಡಾರಿ, ಸರೋಜಾ ಯಶ್ವಂತ್, ಪ್ರಭಾವ, ಕೋಶಾಧಿಕಾರಿ ಚೈತನ್ಯ ಎಂ.ಜಿ. ಉಪಸ್ಥಿತರಿದ್ದರು.
ತುಳು ಪೀಠದ ಸಹಾಯಕರಾದ ಪ್ರಸಾದ್ ಅಂಚನ್ ಧನ್ಯವಾದ ಸಮರ್ಪಿಸಿದರು. ಪೂರ್ವಿಕ ನಿರೂಪಿಸಿದರು. ಸಮಾರೋಪದಲ್ಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

