ಮಂಗಳೂರು : ನಿತ್ಯ ಮಂತ್ರ ಪಠಣದಿಂದ ಶರೀರದಲ್ಲಿ ಸಕಾರಾತ್ಮಕ ಶಕ್ತಿ ವೃದ್ಧಿಯಾಗಿ ಮಾನಸಿಕ ಒತ್ತಡ ಕಡಿಮೆಯಾಗಲು ಸಹಕಾರಿಯಾಗುತ್ತದೆ ಎಂದು ಧರ್ಮದರ್ಶಿ ಹರಿಕೃಷ್ಣ ಪುನರೂರು ನುಡಿದರು. ಅವರು ಕೂಟ ಮಹಾಜಗತ್ತು ಮಂಗಳೂರು ಅಂಗ ಸಂಸ್ಥೆಯ ಆಶ್ರಯದಲ್ಲಿ ಪಾಂಡೇಶ್ವರದ ಗುರು ನರಸಿಂಹ ಸಭಾಭವನದಲ್ಲಿ ಹಮ್ಮಿಕೊಂಡಿರುವ 21 ದಿನಗಳ 25ನೇ ವರ್ಷದ ವಸಂತ ವೇದ ಪಾಠ ಶಿಬಿರದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿದ್ದರು. ಇದೊಂದು ಅಧ್ಯಾತ್ಮಿಕ ಪ್ರಕ್ರಿಯೆ, ಪ್ರಕೃತಿಯ ಆರಾಧನೆ, ನಿತ್ಯ ಅನುಷ್ಠಾನ ಮಾಡುವುದರಿಂದ ಮನಸ್ಸು ಸಾತ್ವಿಕವಾಗಿದ್ದು ಮಕ್ಕಳ ಮನಸ್ಸು ವಿಚಲಿತವಾಗದೆ ಶಿಕ್ಷಣದ ಕಡೆಗೆ ಕೇಂದ್ರೀಕೃತವಾಗಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಶ್ರೀಧರ ಹೊಳ್ಳ ಪವಿತ್ರ ಶಬ್ದಗಳನ್ನೊಳಗೊಂಡ ಮಂತ್ರೋಚ್ಛಾರಣೆಯ ಲಯಬದ್ಧ ಪುನರಾವರ್ತನೆಯಿಂದ ಮಾತಿನಲ್ಲಿ ಸ್ಪಷ್ಟತೆ ಬರಲು ಸಾಧ್ಯ ಅಲ್ಲದೆ ಮೆದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ ಎಂದರು. ಶಿಬಿರದ ಗುರುಗಳಾದ ಶ್ರೀಕರ ಭಟ್, ಕಾರುಣ್ಯ ನಿಧಿ ಭಟ್ ಬದುಕಿನಲ್ಲಿ ಶಿಸ್ತಿನ ಜೀವನ ನಡೆಸಲು ಇಂತಹ ವೇದ ಪಾಠ ಶಿಬಿರಗಳು ಅತ್ಯಂತ ಸಹಕಾರಿ ಮುಂದಿನ ದಿನಗಳಲ್ಲಿ ಪ್ರತಿಯೊಬ್ಬ ಬ್ರಾಹ್ಮಣನು ಮಕ್ಕಳನ್ನು ಇಂತಹ ಶಿಬಿರಗಳಿಗೆ ಕಳುಹಿಸಿ ಸದುಪಯೋಗ ಪಡೆಯಬೇಕೆಂದು ಹೇಳಿದರು.
ಮಕ್ಕಳು ಗುರುದ್ವಯರಿಗೆ ಗುರುವಂದನೆ ಸಲ್ಲಿಸಿದರು ವೇದ ಪಾಠ ಶಿಬಿರದ ಬಗ್ಗೆ ಪೋಷಕರು ಮೆಚ್ಚುಗೆಯ ಮಾತುಗಳನ್ನಾಡಿದರು. ಮಹಿಳಾ ವೇದಿಕೆಯ ಅಧ್ಯಕ್ಷೆ ಪ್ರಭಾ ಎಸ್ ರಾವ್ ಮ್ಯಾನೇಜರ್ ಶಿವರಾಂ ರಾವ್ ಕೋಶಾಧಿಕಾರಿ ಪದ್ಮನಾಭ ಮಯ್ಯ ಮೊದಲಾದವರು ಉಪಸ್ಥಿತರಿದ್ದರು. ವಿದುಷಿ ಶ್ರೀಮತಿ ಪ್ರತಿಮಾ ಶ್ರೀಧರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

