ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಮದುವೆ ಮನೆಯ ಸಂಭ್ರಮ, ಸಡಗರ. ನಾಳೆ ಶನಿವಾರ ಸಂಜೆ ಗಂಟೆ 6.48ರ ಗೋಧೂಳಿಲಗ್ನ ಸುಮುಹೂರ್ತದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯುವ 53ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮದುವೆಯಾಗಲು ಈಗಾಗಲೆ 90ಕ್ಕೂ ಮಿಕ್ಕಿ ವಧೂ-ವರರು ಹೆಸರು ನೋಂದಾಯಿಸಿದ್ದಾರೆ.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ವೀ. ಹೆಗ್ಗಡೆಯವರು ಮತ್ತು ಹರ್ಷೇಂದ್ರ ಕುಮಾರ್ ಅವರ ಮಾರ್ಗದರ್ಶನದಲ್ಲಿ ಸಕಲ ಸಿದ್ಧತೆಗಳನ್ನೂ ಪೂರೈಸಲಾಗಿದೆ.
ನವದೆಹಲಿಯಲ್ಲಿ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿಯಾಗಿರುವ ಮಾನ್ಯ ಟಿ.ಬಿ. ಜಯಚಂದ್ರ, ಶಾಸಕ ಹರೀಶ್ ಪೂಂಜ ಮತ್ತು ವಿಧಾನ ಪರಿಷತ್ ಸದಸ್ಯರಾದ ಕೆ. ಪ್ರತಾಪಸಿಂಹ ನಾಯಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ನೂತನ ದಂಪತಿಗಳಿಗೆ ಶುಭ ಹಾರೈಸುವರು.
ವರದಕ್ಷಿಣೆ ಹಾಗೂ ಮದುವೆಗಾಗುವ ದುಂದುವೆಚ್ಚವನ್ನು ತಡೆಯುವ ಉದ್ದೇಶದಿಂದ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು 1972ರಲ್ಲಿ 88 ಜೊತೆ ವಿವಾಹದೊಂದಿಗೆ ಆರಂಭಿಸಿದ ಉಚಿತ ಸಾಮೂಹಿಕ ವಿವಾಹವನ್ನು ಪ್ರತಿ ವರ್ಷವೂ ಏಪ್ರಿಲ್/ಮೇ ತಿಂಗಳಿನಲ್ಲಿ ನಡೆಸುತ್ತಿದ್ದು, ಕಳೆದ ವರ್ಷದ ವರೆಗೆ 12,900 ಜೊತೆ ಸಾಮೂಹಿಕ ವಿವಾಹದಲ್ಲಿ ಮದುವೆಯಾಗಿದ್ದು ಸುಖ-ಶಾಂತಿ , ನೆಮ್ಮದಿಯ ದಾಂಪತ್ಯ ಜೀವನ ನಡೆಸುತ್ತಿದ್ದಾರೆ.
ಇಲ್ಲಿಯ ವರೆಗೂ ಒಂದು ಕೂಡಾ ವಿಚ್ಚೇದನ ಪ್ರಕರಣ ವರದಿಯಾಗಿಲ್ಲ ಎಂಬುದು ಗಮನಿಸಬೇಕಾದ ಅಂಶ.
ಸರ್ಕಾರ, ರೋಟರಿಕ್ಲಬ್, ಲಯನ್ಸ್ಕ್ಲಬ್ ಮೊದಲಾದ ಸ್ವಯಂ-ಸೇವಾ ಸಂಸ್ಥೆಗಳು ಹಾಗೂ ಕಟೀಲು, ಸುಬ್ರಹ್ಮಣ್ಯ ಮೊದಲಾದ ದೇವಸ್ಥಾನಗಳಲ್ಲಿಯೂ ಧರ್ಮಸ್ಥಳದಲ್ಲಿ ನಡೆಯುವ ಉಚಿತ ಸಾಮೂಹಿಕ ವಿವಾಹ ವಿಧಾನವನ್ನು ಮಾದರಿಯಾಗಿ ಮಾನ್ಯತೆ ಮಾಡಿ ಅನುಸರಿಸುತ್ತಿರುವುದರ ಬಗ್ಯೆ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ವಿಶೇಷ ಸಂತಸ ವ್ಯಕ್ತ ಪಡಿಸಿದ್ದಾರೆ.
ಉಚಿತ ಸಾಮೂಹಿಕ ವಿವಾಹ ಸಮಾರಂಭ: ಶನಿವಾರ ಸಂಜೆ ೬.೪೮ರ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ಎಲ್ಲಾ ಜಾತಿಯವರ ಸಂಪ್ರದಾಯದAತೆ ಅಮೃತವರ್ಷಿಣಿ ಸಭಾಭವದಲ್ಲಿ ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸಲಾಗುವುದು.
ಇಂದು ಶುಕ್ರವಾರವೇ ವಧೂ-ವರರು ಹಾಗೂ ಅವರ ಹಿರಿಯರು ಧರ್ಮಸ್ಥಳಕ್ಕೆ ಆಗಮಿಸಿದ್ದು ಅವರಿಗೆ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಅವರು ನೀಡಿದ ಪ್ರಮಾಣಪತ್ರ ಹಾಗೂ ದಾಖಲೆಗಳ ಮೂಲಪ್ರತಿಗಳನ್ನು ಪರಿಶೀಲಿಸಿ ಎಲ್ಲವೂ ಕ್ರಮಬದ್ಧವಾಗಿದ್ದಲ್ಲಿ ಅವರಿಗೆ ಮದುವೆಯಾಗಲು ಅವಕಾಶ ನೀಡಲಾಗುವುದು.
ಪೂಜ್ಯ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಹೇಮಾವತಿ ವೀ. ಹೆಗ್ಗಡೆಯವರು ಶನಿವಾರ ಬೆಳಿಗ್ಯೆಯಿಂದಲೆ ವರನಿಗೆ ಧೋತಿ, ಶಾಲು ಹಾಗೂ ವಧುವಿಗೆ ಸೀರೆ, ರವಿಕೆ ಮತ್ತು ಮೂಗುತಿ ವಿತರಿಸುವರು. ಮಂಗಳಸೂತ್ರವನ್ನು ವಿವಾಹದ ಶುಭ ಮುಹೂರ್ತದಲ್ಲಿ ಪೂಜ್ಯ ಹೆಗ್ಗಡೆಯವರು, ಹೇಮಾವತಿ ಹೆಗ್ಗಡೆಯವರು ಹಾಗೂ ಗಣ್ಯ ಅತಿಥಿಗಳು ವಿತರಿಸಿ ಶುಭ ಹಾರೈಸುವರು.
ಶನಿವಾರ ಸಂಜೆ 4 ಗಂಟೆಗೆ ಭವ್ಯ ಮೆರವಣಿಗೆಯಲ್ಲಿ ವಧೂ-ವರರು ದೇವಸ್ಥಾನಕ್ಕೆ ಪ್ರದಕ್ಷಿಣೆ ಬಂದು ಅಮೃತವರ್ಷಿಣಿ ಸಭಾಭವನಕ್ಕೆ ತೆರಳುವರು.
ವೇದಘೋಷ, ಮಂಗಳವಾದ್ಯ, ಮಂತ್ರಾಕ್ಷತೆ ವಿತರಣೆಯೊಂದಿಗೆ 6.48 ರ ಶುಭಮುಹೂರ್ತದಲ್ಲಿ ಹಾರ ವಿನಿಮಯ, ಮಾಂಗಲ್ಯಧಾರಣೆ ನಡೆಯುತ್ತದೆ.
ಪೂಜ್ಯ ಹೆಗ್ಗಡೆಯವರು ಹಾಗೂ ಗಣ್ಯ ಅತಿಥಿಗಳು ನೂತನ ದಂಪತಿಗಳಿಗೆ ಶುಭ ಹಾರೈಸಿದ ಬಳಿಕ ನೂತನ ದಂಪತಿಗಳು ದಾಂಪತ್ಯ ದೀಕ್ಷೆ ಸ್ವೀಕರಿಸುವರು.
ಬಳಿಕ ದೇವರ ದರ್ಶನ ಮಾಡಿ, ಅನ್ನಪೂರ್ಣ ಭೋಜನಾಲಯದಲ್ಲಿ ಮದುವೆ ಊಟ ಮಾಡಿ ದಂಪತಿಗಳು ಊರಿಗೆ ತೆರಳುವರು.
ಸರ್ಕಾರದ ನಿಯಮದಂತೆ ವಿವಾಹ ನೋಂದಣಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದು ಮುಂದೆ ಅಧಿಕೃತ ವಿವಾಹ ನೋಂದಣಿ ಪ್ರಮಾಣಪತ್ರವನ್ನು ದಂಪತಿಗಳಿಗೆ ನೀಡಲಾಗುವುದು.