ರಾಜ್ಯ ಸರ್ಕಾರದ 52 ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯುವ ನಿರ್ಧಾರಕ್ಕೆ ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಆಕ್ಷೇಪ: ಕಾನೂನಿನ ಆಳ್ವಿಕೆ ಹಾಗೂ ನ್ಯಾಯಾಂಗದ ಸ್ವಾಯತ್ತತೆ ರಕ್ಷಣೆಗೆ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ

0
5

ಮಂಗಳೂರು: ರಾಜ್ಯ ಸಚಿವ ಸಂಪುಟವು ದಂಡ ಪ್ರಕ್ರಿಯಾ ಸಂಹಿತೆ ಕಲಂ 321ರ ಅಡಿಯಲ್ಲಿ 52 ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲು ಕೈಗೊಂಡಿರುವ ನಿರ್ಧಾರದ ಕುರಿತು ‘ಹಿಂದೂ ರಾಷ್ಟ್ರ ಸಮನ್ವಯ ಸಮಿತಿ’ಯು ತನ್ನ ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದೆ. ಈ ಕುರಿತು ಸಮಿತಿಯು ಮಾನ್ಯ ಮುಖ್ಯಮಂತ್ರಿಗಳಿಗೆ ಸವಿಸ್ತಾರವಾದ ಮನವಿಯೊಂದನ್ನು ಸಿದ್ಧಪಡಿಸಿದ್ದು, ಅದನ್ನು ದಕ್ಷಿಣ ಕನ್ನಡ ಚುನಾವಣಾ ತಹಶೀಲ್ದಾರರಾದ ಶ್ರೀ.ದಯಾನಂದ ಅವರ ಮೂಲಕ ಸಲ್ಲಿಸಲಾಯಿತು. ಗಲಭೆ, ಕಾನೂನುಬಾಹಿರ ಗುಂಪುಗೂಡಿಕೆ, ಸರ್ಕಾರಿ ಅಧಿಕಾರಿಗಳ ಮೇಲಿನ ಹಲ್ಲೆ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗಳ ಧ್ವಂಸದಂತಹ ಗಂಭೀರ ಸ್ವರೂಪದ ಪ್ರಕರಣಗಳನ್ನು ಹಿಂಪಡೆಯಲು ಮುಂದಾಗಿರುವುದು ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಆತಂಕಕಾರಿ ವಿಷಯವಾಗಿದೆ ಎಂದು ಸಮಿತಿ ತಿಳಿಸಿದೆ. ಪೊಲೀಸ್ ಇಲಾಖೆ ಹಾಗೂ ರಾಜ್ಯ ಕಾನೂನು ಅಭಿಯೋಜನಾ ಇಲಾಖೆಯ ಹಿರಿಯ ಅಧಿಕಾರಿಗಳ ಸ್ಪಷ್ಟ ಆಕ್ಷೇಪಗಳಿದ್ದಾಗಲೂ ಇಂತಹ ನಿರ್ಧಾರ ಕೈಗೊಳ್ಳುವುದು ಕಾರ್ಯನಿರ್ವಹಣಾ ಅಧಿಕಾರದ ದುರುಪಯೋಗವಾಗುತ್ತದೆ ಮತ್ತು ಇದು ಸಮಾಜಕ್ಕೆ ತಪ್ಪು ಸಂದೇಶವನ್ನು ರವಾನಿಸುತ್ತದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ. 

ದಂಡ ಪ್ರಕ್ರಿಯಾ ಸಂಹಿತೆಯ ಕಲಂ 321 ಸರ್ಕಾರಕ್ಕೆ ಅನಿಯಂತ್ರಿತ ಅಥವಾ ರಾಜಕೀಯ ಉದ್ದೇಶಪೂರಿತ ಅಧಿಕಾರವನ್ನು ನೀಡವುದಿಲ್ಲ ಎಂದು ಸಮಿತಿ ನೆನಪಿಸಿದೆ. ಸಾರ್ವಜನಿಕ ಅಭಿಯೋಜಕರು ಸರ್ಕಾರದ ಕೇವಲ ಪ್ರತಿನಿಧಿಗಳಲ್ಲ, ಅವರು ನ್ಯಾಯಾಲಯದ ಅಧಿಕಾರಿಗಳಾಗಿದ್ದು ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳಬೇಕೆಂಬ ಮಾನ್ಯ ಸುಪ್ರೀಂ ಕೋರ್ಟ್ ಮತ್ತು ಕರ್ನಾಟಕ ಹೈಕೋರ್ಟ್‌ನ ವಿವಿಧ ತೀರ್ಪುಗಳನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ, 52 ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯುವ ಸಚಿವ ಸಂಪುಟದ ನಿರ್ಧಾರವನ್ನು ತಕ್ಷಣವೇ ಜಾರಿಗೆ ತರದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು, ಸಾರ್ವಜನಿಕ ಅಭಿಯೋಜಕರ ಸ್ವತಂತ್ರ ಕಾರ್ಯನಿರ್ವಹಣೆಯ ಮೇಲೆ ಯಾವುದೇ ರಾಜಕೀಯ ಒತ್ತಡ ಹೇರಬಾರದು ಮತ್ತು ಕಾನೂನು ಜಾರಿಯ ಸಿಬ್ಬಂದಿಗಳ ವಿರುದ್ಧದ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಕಟ್ಟುನಿಟ್ಟಾಗಿ ಮುಂದುವರಿಸಬೇಕು ಎಂದು ಆಗ್ರಹಿಸಲಾಗಿದೆ. ರಾಜ್ಯ ಸರ್ಕಾರವು ರಾಜಕೀಯ ಹಿತಾಸಕ್ತಿಗಿಂತ ಮಿಗಿಲಾಗಿ ನ್ಯಾಯ, ಸಂವಿಧಾನಾತ್ಮಕ ಮೌಲ್ಯಗಳು ಹಾಗೂ ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡಲಿದೆ ಎಂಬ ವಿಶ್ವಾಸವನ್ನು ಸಮಿತಿ ವ್ಯಕ್ತಪಡಿಸಿದೆ. 

ಈ ಸಂದರ್ಭದಲ್ಲಿ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ಶ್ರೀ.ದಿನಕರ್ ಬಜಾಲ್, ಶ್ರೀ.ಸುರೇಂದ್ರ ಜಪ್ಪಿನಮೊಗರು, ಹಿಂದೂ ಮಹಾಸಭಾದ ರಾಜ್ಯ ಅಧ್ಯಕ್ಷರಾದ ಶ್ರೀ.ಲೋಹಿತ್ ಕುಮಾರ್ ಸುವರ್ಣ, ನ್ಯಾಯವಾದಿಗಳಾದ ಜ್ಯೋತಿ ಗೌಡ ಹಾಗೂ ಹಿಂದುತ್ವವಾದಿಗಳಾದ ಶ್ರೀ ರಾಜಗೋಪಾಲ್ (ರಾಜ ಗೋವಿಂದ), ಶ್ರೀ. ಪ್ರಕಾಶ್ ಬಜಾಲ್, ಶ್ರೀ ಜಯಪ್ರಕಾಶ್ ಬಜಾಲ್, ಶ್ರೀ. ಭಾಸ್ಕರ ಆಚಾರ್ಯ, ಶ್ರೀ. ಭಾಸ್ಕರ ಕೊಳ್ನಾಡು, ಶ್ರೀ. ವಿಠಲ್ ನಾಯಕ್, ಶ್ರೀ. ಚಂದ್ರಕಾಂತ್ ಕಾಮತ್, ಶ್ರೀ. ಗಿರಿಧರ್ ಪೆರ್ಜಿಲ, ಶ್ರೀ ಸಂತೋಷ್, ಶ್ರೀ ನಿತಿನ್ ಅತ್ತಾವರ, ಶ್ರೀ ಪ್ರಕಾಶ್ ಪ್ರಧಾನ್ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಶ್ರೀ ಉಪೇಂದ್ರ ಹಾಗೂ ಶ್ರೀ ರಾಜೇಶ್ ಆಚಾರ್ಯ ಸೇರಿದಂತೆ ಹಲವು ಹಿಂದುತ್ವನಿಷ್ಟರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here