ಕಾರ್ಕಳ: ಆಸ್ತಿ ವಿಚಾರವಾಗಿ ಉಂಟಾದ ಜಗಳವು ಭೀಕರ ತಿರುವು ಪಡೆದು ತಮ್ಮನೇ ಅಣ್ಣನನ್ನು ಕೊಲೆ ಮಾಡಿದ ಘಟನೆ ತಾಲೂಕಿನ ಮಿತ್ತಬೆಟ್ಟು–ಹಿರಿಯಂಗಡಿ ಪ್ರದೇಶದಲ್ಲಿ ಶನಿವಾರ ರಾತ್ರಿ ನಡೆದಿದೆ.
ಸ್ಥಳೀಯ ನಿವಾಸಿ ರಿಚಾರ್ಡ್ ಡಿಸೋಜ (65) ಕೊಲೆಯಾದವರು. ಇವರು ತಮ್ಮ ಹೆರಾಲ್ಡ್ ಡಿಸೋಜ ಅವರೊಂದಿಗೆ ಒಂದೇ ಮನೆ ಹಾಗೂ ಜಾಗದ ವಿಚಾರವಾಗಿ ದೀರ್ಘಕಾಲದಿಂದ ತಕರಾರು ಹೊಂದಿದ್ದರು.
ಮೇ 2ರಂದು ಸಂಜೆ ಸುಮಾರು 6 ಗಂಟೆ ವೇಳೆಗೆ ಇದೇ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ಉಂಟಾಗಿದೆ. ಈ ವೇಳೆ ಆಕ್ರೋಶಗೊಂಡ ಹೆರಾಲ್ಡ್ ಡಿಸೋಜ, ಮರದ ರೀಪಿನಿಂದ ಅಣ್ಣ ರಿಚಾರ್ಡ್ ಡಿಸೋಜ ಅವರಿಗೆ ಹೊಡೆದು ಕೊಲೆ ಮಾಡಿದ್ದಾನೆ ಎಂದು ಮೃತರ ಪತ್ನಿ ಜೆಸಿಂತ ಡಿಸೋಜ ದೂರಿನಲ್ಲಿ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಹರಿರಾಂ ಶಂಕರ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಹೆರಾಲ್ಡ್ ಡಿಸೋಜನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

