ಕಾರ್ಕಳ : ಕಾಬೆಟ್ಟುನಲ್ಲಿರುವ ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಸಂಸ್ಥೆಯ ಸುತ್ತಮುತ್ತಲಿನ ಪರಿಸರದಲ್ಲಿ ಗಿಡಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಡಾ. ಗಿರಿಧರ್ ಸಾಲಿಯಾನ್, ರೊಹಿನಿ ತಲ್ಲೂರ ಉಪವಲಯ ಅರಣ್ಯಾಧಿಕಾರಿಗಳು ಕಾರ್ಕಳ, ಗಸ್ತು ಅರಣ್ಯ ಪಾಲಕರಾದ ಯಮನೂರು, ಸರಕಾರಿ ಪಾಲಿಟೆಕ್ನಿಕ್ ನ ಪ್ರಾಧ್ಯಾಪಕರಾದ ಚಿತ್ರಕುಮಾರ್ ಕೆ.ವಿ ಹಾಗೂ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ನಂತರ ನಡೆದ ಪ್ರಮಾಣಪತ್ರ ವಿತರಣಾ ಸಮಾರಂಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಗಿರಿಧರ್ ಸಾಲಿಯಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು ಹಾಗೂ ವಿಶ್ವ ಪರಿಸರ ದಿನ ಸಂಬಂಧಿತ ಸ್ಲೈಡ್ ಪ್ರದರ್ಶನ ಮೂಲಕ ಹಸಿರು ಮನೆ ಪರಿಣಾಮ, ಆಮ್ಲ ಮಳೆ, ಜಾಗತಿಕ ತಾಪಮಾನ, ಓಝೋನ್ ಪದರದ ಕ್ಷೀಣಿಸುವಿಕೆ ಬಗ್ಗೆ ಮಾಹಿತಿ ನೀಡಿ ಪರಿಸರ ಸಂರಕ್ಷಣೆಯ ಮಹತ್ವವನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ರೋಹಿಣಿ ತಲ್ಲೂರ ಅವರು ಮಾತನಾಡಿ. “ಪರಿಸರವೆಂದರೆ ಕೇವಲ ಮರಗಳಲ್ಲ ನಮ್ಮ ಸುತ್ತಮುತ್ತಲಿನ ಪ್ರಕೃತಿ ಜೀವಿಗಳು ಗಾಳಿ, ನೀರು, ಮಣ್ಣು,ಜಲಚರ ಮತ್ತು ಸಸ್ಯಗಳ ಸಮೂಹವನ್ನು ಪರಿಸರ ಎನ್ನುತ್ತೇವೆ. ಆದರೆ ನಮಗೆ ಗಿಡಮರಗಳಿಂದ ಹೆಚ್ಚು ಉಪಯುಕ್ತವಾದ ಆಮ್ಲಜನಕ ದೊರೆಯುವುದರಿಂದ ಮರಗಳನ್ನು ಹೆಚ್ಚು ಅವಲಂಬಿಸಿದ್ದೇವೆ ” ಎಂದು ಹೇಳಿ ಪರಿಸರ ಸಂರಕ್ಷಣೆ ಮಹತ್ವವನ್ನು ವಿವರಿಸಿದರು.
ಹಾಗೂ ಈ ಕಾರ್ಯಕ್ರಮದಲ್ಲಿ ಸಂಸ್ಥೆಯಲ್ಲಿ ಕೌಶಲ್ಯ ತರಬೇತಿ ಪೂರೈಸಿದ 50 ಜನ ಶಿಕ್ಷಣಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಹಾಗೂ ಪ್ರಮಾಣ ಪತ್ರ ಪಡೆದ ಶಿಕ್ಷಣಾರ್ಥಿಗಳು ಸಂಸ್ಥೆಯ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಶಿಕ್ಷಕಿ ವಿಂಧ್ಯಾ ಕಾರ್ಯಕ್ರಮ ನಿರೂಪಿಸಿದರು.

