ವರದಿ -ಮಂದಾರ ರಾಜೇಶ್ ಭಟ್
ಮೂಡುಬಿದಿರೆ ತಾಲೂಕಿನ ಶಿರ್ತಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಡುಕೋಣಾಜೆ ಗ್ರಾಮದಲ್ಲಿ ಸರ್ಕಾರಿ ಭೂಮಿಯನ್ನು ಕಬಳಿಸುವ ಅಕ್ರಮ ಪ್ರಯತ್ನವೊಂದು ವರದಿಯಾಗಿದೆ.

ಈ ಹಿಂದೆ ಕಂದಾಯ ಇಲಾಖೆಯಿಂದ ತೆರವು ಕಾರ್ಯಾಚರಣೆಗೆ ಒಳಗಾಗಿದ್ದ ವ್ಯಕ್ತಿಒಬ್ಬ , ಸರ್ಕಾರ ಅಳವಡಿಸಿದ್ದ ‘ಅತಿಕ್ರಮಣ ನಿಷೇಧ’ದ ನಾಮಫಲಕವನ್ನು ಕಿತ್ತೆಸೆದು ಕಾನೂನು ಉಲ್ಲಂಘಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಹಿನ್ನೆಲೆ ಮತ್ತು ವರ್ತನೆ
ಈ ಕೃತ್ಯ ಎಸಗಿದ ವ್ಯಕ್ತಿ ಹಿಂದೆಯೂ ಅರಣ್ಯ ನಾಶ, ಸಾರ್ವಜನಿಕ ನಿಂದನೆ ಹಾಗೂ ವಿದ್ಯುತ್ ಕಂಬ ಏರಿ ಅನಾಹುತ ಸೃಷ್ಟಿಸುವಂತಹ ಅಶಿಸ್ತಿನ ವರ್ತನೆಗಳಲ್ಲಿ ತೊಡಗಿಸಿಕೊಂಡಿದ್ದ ಎನ್ನಲಾಗಿದೆ.
ಸುಮಾರು 5 ಎಕರೆ ಬೆಲೆಬಾಳುವ ಸರ್ಕಾರಿ ಜಾಗವನ್ನು ಕಬಳಿಸುವ ಉದ್ದೇಶದಿಂದ ಅಧಿಕಾರಿಗಳನ್ನು ದಾರಿ ತಪ್ಪಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ.
ಇದರ ಹಿಂದೆ ವ್ಯವಸ್ಥಿತ ತಂಡವೊಂದು ಕಾರ್ಯನಿರ್ವಹಿಸುತ್ತಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳೀಯರು ಕೆಲವರು ಸಾತು ನೀಡುತ್ತಿದ್ದಾರೆ ಎಂದು ಮಾಹಿತಿ ಇದೆ. ಈತ ಅಕ್ಕಪಕ್ಕದ ಖಾಸಗಿ ಜಮೀನಿಗೂ ತೊಂದರೆ ನೀಡುತ್ತಿರುವುದು ವರದಿಯಾಗಿದೆ.
ಅಧಿಕಾರಿಗಳ ಕ್ರಮಕ್ಕೆ ಆಗ್ರಹ
ವಿಷಯ ತಿಳಿಯುತ್ತಿದ್ದಂತೆಯೇ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮರು ನಾಮಫಲಕ ಅಳವಡಿಸಿದ್ದಾರೆ ಹಾಗೂ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. “ಸರ್ಕಾರಿ ಸ್ವತ್ತು ಎಂದರೆ ಅದು ಜನರ ಆಸ್ತಿ. ಇಂತಹ ಪುಂಡಾಟಿಕೆ ನಡೆಸುವವರ ವಿರುದ್ಧ ಕೇವಲ ದಂಡ ವಿಧಿಸದೆ, ಕಠಿಣ ಶಿಕ್ಷೆ ವಿಧಿಸಬೇಕು,” ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಈ ಭೂ ಮಾಫಿಯಾದ ಹಿಂದಿರುವ ನೈಜ ವ್ಯಕ್ತಿಗಳನ್ನು ಪತ್ತೆಹಚ್ಚಿ ಸಾರ್ವಜನಿಕ ಆಸ್ತಿಯನ್ನು ರಕ್ಷಿಸಬೇಕಾದ ಜವಾಬ್ದಾರಿ ಆಡಳಿತ ವ್ಯವಸ್ಥೆಯ ಮೇಲಿದೆ.

