ಬೆಂಗಳೂರು : ರಾಜ್ಯದ ಅತಿ ದೊಡ್ಡ ಮಾದಿಗ ಸಮಾಜಕ್ಕೆ ಸಚಿವ ಸಂಪುಟದಲ್ಲಿ ಇನ್ನಷ್ಟು ಬಲಿಷ್ಠ ಹಾಗೂ ನ್ಯಾಯಯುತ ರಾಜಕೀಯ ಪ್ರಾತಿನಿಧ್ಯ ಒದಗಿಸಬೇಕು. ಆರ್.ಬಿ.ತಿಮ್ಮಾಪುರಗೆ ಉಪಮುಖ್ಯಮಂತ್ರಿ, ಕೆ , ಹೆಚ್. ಮುನಿಯಪ್ಪರವರ ಜೊತೆಗೆ ಹೆಚ್. ಆಂಜನೇಯ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಕರ್ನಾಟಕ ರಾಜ್ಯ ಯುವ ಸಮೂಹದ ರಾಜ್ಯಾಧ್ಯಕ್ಷ ಡಾ. ಎಸ್. ಸಂಗಮೇಶ್ ಆಗ್ರಹಿಸಿದ್ದಾರೆ.
ರಾಜ್ಯದ ಎಲ್ಲಾ ಮಾದಿಗ ಸಂಘಟನೆಗಳು, ಮಠಾಧೀಶರು, ಬುದ್ಧಿಜೀವಿಗಳು, ಯುವ ಸಂಘಟನೆಗಳು, ನಿವೃತ್ತ ಅಧಿಕಾರಿಗಳು ಹಾಗೂ ಪ್ರಗತಿಪರ ಶಕ್ತಿಗಳು ಒಂದೇ ವೇದಿಕೆಯಲ್ಲಿ ನಿಂತು ಈ ನ್ಯಾಯಯುತ ಪ್ರಾತಿನಿಧ್ಯೆದ ಬೇಡಿಕೆಗೆ ಬೆಂಬಲ ನೀಡಬೇಕೆಂದು ಹೇಳಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಮಾದಿಗ ಜನಾಂಗ ರಾಜ್ಯದಲ್ಲಿ ಅತಿ ದೊಡ್ಡ ದಲಿತ ಸಮುದಾಯವಾಗಿದ್ದು, ಸಾಮಾಜಿಕ ನ್ಯಾಯ, ಕಾಂಗ್ರೆಸ್ ಪಕ್ಷದ ಬಲವರ್ಧನೆ ಹಾಗೂ ಜನಪರ ಹೋರಾಟಗಳಲ್ಲಿ ನಿರಂತರವಾಗಿ ಪ್ರಮುಖ ಪಾತ್ರವಹಿಸಿದೆ. ಆದಾಗ್ಯೂ, ಸಮುದಾಯಕ್ಕೆ ಸರ್ಕಾರದಲ್ಲಿ ತಕ್ಕ ಮಟ್ಟಿನ ರಾಜಕೀಯ ಸ್ಥಾನಮಾನ ಸಿಗದಿರುವುದು ಬೇಸರದ ಸಂಗತಿಯಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದ ಅತಿ ದೊಡ್ಡ ದಲಿತ ಸಮುದಾಯದ ಜನಸಂಖ್ಯೆ, ರಾಜಕೀಯ ಶಕ್ತಿ ಹಾಗೂ ಸಾಮಾಜಿಕ ಕೊಡುಗೆಯನ್ನು ಪರಿಗಣಿಸಿದರೆ ಸಮರ್ಪಕ ಪ್ರಾತಿನಿಧ್ಯೆ ದೊರೆತಿಲ್ಲ. ರಾಜಕೀಯ ಪ್ರಾತಿನಿಧ್ಯ ಕೇವಲ ಹುದ್ದೆಯ ಪ್ರಶ್ನೆಯಲ್ಲ; ಅದು ಸಮುದಾಯದ ಗೌರವ, ಹಕ್ಕು. ಆಡಳಿತದಲ್ಲಿ ಪಾಲುದಾರಿಕೆಯ ಸಂಕೇತವಾಗಿದೆ. ಸಮುದಾಯದ ಭಾವನೆಗಳನ್ನು ಗೌರವಿಸಿ ತಕ್ಷಣ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದಿದ್ದಾರೆ ಡಾ ಎಸ್ ಸಂಗಮೇಶ್.

