ಮಂಗಳೂರು : ಜಿಲ್ಲಾ ರೋಟರಾಕ್ಟ್ ಸಂಸ್ಥೆಯ ಮತ್ತು ರೋಟರಾಕ್ಟ್ ಮಂಗಳೂರು ಸಿಟಿ ಸಂಸ್ಥೆಯ ಜಂಟಿ ಆಶ್ರಯಲದಲ್ಲಿ ರೋಟರಾಕ್ಟ್ ಮಾಹಿತಿ ಮತ್ತು ಜಾಗೃತಿ ಅಭಿಯಾನದ ಅಂಗವಾಗಿ ದಿ। ರೋ. ಶಾಂತರಾಮ್ ವಾಮಂಜೂರು ಸ್ಮಾರಕ 20ನೇ ವಾರ್ಷಿಕ ರಾಜ್ಯ ಮಟ್ಟದ ಅಂತರ್ಕ್ಲಬ್ ರೋಟರಾಕ್ಟ್ ರಸಪ್ರಶ್ನೆ ಸ್ಪರ್ಧಾಕೂಟವು ಸಂಸ್ಥೆಯ ಸಭಾಪತಿಯವರಾದ ರೋ। ಡಾ। ದೇವದಾಸ್ ರೈ ನೇತೃತ್ವದಲ್ಲಿ ತಾ. 03.05.2026 ರಂದು ನಗರದ ಈಡನ್ ಕ್ಲಬ್ ಸಭಾಂಗಣದಲ್ಲಿ ಜರಗಿತು.
ನಗರದ ರೋಟರಾಕ್ಟ್ ಕ್ಲಬ್ ಮಣೇಲ್ ಶ್ರೀನಿವಾಸ ನಾಯಕ್ ಉದ್ಯಮ ಆಡಳಿತ ಕಾಲೇಜನ್ನು ಪ್ರತಿನಿಧಿಸಿದ ರೋ। ಕಾವ್ಯ ಮತ್ತು ರೋ। ಶ್ರೀನಿಧಿ ತಂಡವು ಪ್ರಥಮ ಸ್ಥಾನ ಗಳಿಸಿತು. ರೋಟರಾಕ್ಟ್ ಕ್ಲಬ್ ಮೈಸೂರನ್ನು ಪ್ರತಿನಿಧಿಸಿದ ರೋ। ಪ್ರಜ್ವಲ್ ದ್ವಿತೀಯ ಸ್ಥಾನವನ್ನು ಪಡೆದರು. ಇದೊಂದು ರೋಮಾಂಚಕಾರಿ ಹಾಗೂ ಕುತೂಹಲಕಾರಿ ಸ್ಪರ್ಧೆಯಾಗಿತ್ತು.

ಖ್ಯಾತ ತುಳು ಚಲನಚಿತ್ರ ನಟ ಬೋಜರಾಜ ವಾಮಂಜೂರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ತಮ್ಮ ದಿವಂಗತ ಸಹೋದರ ರೋ। ಶಾಂತರಾಮ್ ವಾಮಂಜೂರು ಸ್ಮರಣಾರ್ಥ ವರ್ಷಂಪ್ರತಿ ಈ ಸ್ಪರ್ಧಾಕೂಟವನ್ನು ಆಯೋಜಿಸುವ ರೋಟರಾಕ್ಟ್ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿ, ಸ್ಪರ್ಧಾ ವಿಜೇತರಿಗೆ ಪ್ರಶಸ್ತಿ, ಪ್ರಶಸ್ತಿ ಪ್ರಮಾಣ ಪತ್ರ ಪ್ರಧಾನ ಮಾಡಿ ಅವರ ಸಾಧನೆಯನ್ನು ಅಭಿನಂದಿಸಿದರು.
ರೋಟರಿ ಮಂಗಳೂರು ಸೆಂಟ್ರಲ್ ಸಂಸ್ಥೆಯ ಅಧ್ಯಕ್ಷ ರೋ। ಭಾಸ್ಕರ ರೈ ಯವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ರೋಟರಾಕ್ಟ್ ಸಂಸ್ಥೆಯ ಯುವ ಸದಸ್ಯರು ಸಂಸ್ಥೆಯ ಧೈಯ, ನೀತಿ, ಮಾಹಿತಿ, ಉದ್ದೇಶಗಳ ಜ್ಞಾನವನ್ನು ವೃದ್ಧಿಸಬೇಕು ಮತ್ತು ಸಂಸ್ಥೆಯ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ಸಲಹೆ ನೀಡಿ ಸ್ಪರ್ಧಾ ವಿಜೇತರನ್ನು ಅಭಿನಂದಿಸಿದರು.
ವೇದಿಕೆಯಲ್ಲಿ ರೋಟರಾಕ್ಷ ದಕ್ಷಿಣ ಏಶ್ಯ ಸಂಸ್ಥೆಯ ಅಧ್ಯಕ್ಷ ಸ್ಟೀವನ್ ಡೇರಿಲ್ ಡಿ’ಸೋಜ ಉಪಸ್ಥಿತರಿದ್ದರು. ರೋಟರಾಕ್ಟ್ ಮಂಗಳೂರು ಸಿಟಿ ಸಂಸ್ಥೆಯ ಅಧ್ಯಕ್ಷರಾದ ರೋ। ಅಕ್ಷಯ್ ರೈ ಸ್ವಾಗತಿಸಿದರು. ಜಿಲ್ಲಾ ಮಟ್ಟದ 7 ತಂಡಗಳು ಅಂತಿಮ ಮತ್ತು ನಿರ್ಣಾಯಕ ಸುತ್ತಿಗೆ ಪಡೆದಿದ್ದವು. ಈ ಸ್ಪರ್ಧಾಕೂಟವನ್ನು ರೋಟರಾಕ್ಟ್ ಮಂಗಳೂರು ಸಿಟಿ ಸಂಸ್ಥೆಯ ಸಭಾಪತಿಯವರಾದ ರೋ। ಡಾ| ದೇವದಾಸ್ ರೈ ನಿರೂಪಿಸಿದ್ದರು. ವಲಯ ಪ್ರತಿನಿಧಿ ರೋ। ಚಮನ್ ವಂದಿಸಿದರು.
ವರದಿ : ಎಮ್. ವಿ. ಮಲ್ಯ

