ಪಣಜಿಯಲ್ಲಿ ಜರುಗಿದ ಯಶಸ್ವಿ 21ನೇ ರಾಷ್ಟ್ರೀಯ ಕನ್ನಡ ಸಮ್ಮೇಳನ

0
40

ತಾಯಿ ನಾಡು ನುಡಿಯ ಸೇವೆ ಶ್ರೇಷ್ಠ ಕಾರ್ಯ :- ಮಂಜುನಾಥ್ ಸಾಗರ್

ಪಣಜಿ : ವಿಷ್ಣು ನಾಯ್ಕ್ ವೇದಿಕೆ – ಗೋವಾದ ಪಣಜಿಯಲ್ಲಿ ಆಯೋಜಿಸಿದ್ದ 21ನೇ ರಾಷ್ಟ್ರೀಯ ಕನ್ನಡ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ ಸುಬ್ರಮಣಿ (ಪಲ್ಲವಿ ಮಣಿ) ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ನಾಡು-ನುಡಿಗೆ ಸೇವೆ ಸಲ್ಲಿಸುವುದು ಒಂದು ಶ್ರೇಷ್ಠ ಕಾರ್ಯ ಹಾಗೆ ನಡೆದುಕೊಂಡಾಗ ಒಬ್ಬ ವ್ಯಕ್ತಿ ಪರಿಪೂರ್ಣನಾಗಲು ಸಾಧ್ಯ. ನಾಡು ನುಡಿ ಮತ್ತು ಸಂಸ್ಕೃತಿಗಳಿಗೆ ಶ್ರದ್ಧೆ ಮತ್ತು ಭಕ್ತಿಯಿಂದ ಸೇವೆ ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ.

ಕನ್ನಡವೆಂದರೆ ಅದು ಬರೀ ಭಾಷೆಯಲ್ಲ, ಅದು ನಮ್ಮ ಅಸ್ತಿತ್ವ, ನಮ್ಮ ಉಸಿರು ನಮ್ಮ ಭಾವನೆ ಕನ್ನಡಿಗರದ್ದು ಸಹಪಾಳ್ವೆ, ಸಹಾನುಭೂತಿಯ ಪರಂಪರೆ. ಜಗತ್ತಿನ ಮೂಲೆ ಮೂಲೆಗಳಲ್ಲಿ ಕನ್ನಡಿಗರು ಬದುಕು ಕಟ್ಟಿಕೊಂಡಿದ್ದಾರೆ. ಅವರು ಹೊರ ರಾಜ್ಯದ ಕನ್ನಡಿಗರು ಇರಬಹುದು, ಹೊರ ದೇಶದ ಕನ್ನಡಿಗರು ಇರಬಹುದು, ತಾವಿರುವ ನೆಲ ಜಲಕ್ಕೆ ಋಣಿಯಾಗಿ ನಮ್ಮ ನುಡಿ ಕಲೆ ಮತ್ತು ಸಂಸ್ಕೃತಿಗಳನ್ನು ಉಳಿಸಿ ಬೆಳೆಸುವ ಮತ್ತು ಮುಂದಿನ ಪರಂಪರೆಗೆ ಪರಿಚಯಿಸುವ ಕೆಲಸವನ್ನು ಚಾಚು ತಪ್ಪದೇ ಮಾಡಬೇಕು ಆಗ ನಮ್ಮ ಬದುಕಿಗೆ ಒಂದು ಅರ್ಥ ಬರುತ್ತದೆ ಎಂದರು.

ಜ್ಯೋತಿ ಬೆಳಗಿಸಿ ಸಮ್ಮೇಳನವನ್ನು ಉದ್ಘಾಟಿಸಿದ ಸಮ್ಮೇಳನ ಸಮಿತಿ ಗೌರವಾಧ್ಯಕ್ಷ ಮತ್ತು ಎಂಎನ್ಎಸ್ ಆಗ್ರೋ ಪ್ರೈವೇಟ್ ಲಿಮಿಟೆಡ್ ಮ್ಯಾನೇಜಿಂಗ್ ಡೈರೆಕ್ಟರ್ ಮಹಾಂತೇಶ ಮಹಾಜನ್ ಅವರು ಮಾತನಾಡಿ ಹೃದಯವಾಹಿನಿ ಕರ್ನಾಟಕ ಹೊರದೇಶಗಳಲ್ಲಿ 17ಕ್ಕೂ ಹೆಚ್ಚು ವಿಶ್ವ ಕನ್ನಡ ಸಮ್ಮೇಳನ ಮತ್ತು ಹೊರರಾಜ್ಯಗಳಲ್ಲಿ 20 ರಾಷ್ಟ್ರೀಯ ಕನ್ನಡ ಸಮ್ಮೇಳನಗಳನ್ನು ಆಯೋಜಿಸಿರುವುದು ದೊಡ್ಡ ಸಾಧನೆ. ಇಂತಹ ಸಾಧನೆ ಮಾಡಿದ ಸಂಸ್ಥೆಯನ್ನು ನಾವೆಲ್ಲರೂ ಬೆಂಬಲಿಸಿ ಬೆಳೆಸೋಣ ಎಂದರು.

ರಾಷ್ಟ್ರೀಯ ಕನ್ನಡ ಸಮ್ಮೇಳನ ಸಮಿತಿ – 2004 ಸ್ಥಾಪಕಾಧ್ಯಕ್ಷ ಕೆ ಪಿ ಮಂಜುನಾಥ್ ಸಾಗರ್ ಅವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಕರುನಾಡಿನ ಕಲಾವಿದರು ಸಾಹಿತಿಗಳಿಗೆ 25 ವರ್ಷಗಳಿಂದ ದೇಶ ವಿದೇಶಗಳಲ್ಲಿ 10,000ಕ್ಕೂ ಹೆಚ್ಚು ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿದ್ದೇವೆ. ಈ ಸಾಧನೆಗೈದ ಕರ್ನಾಟಕದ ಏಕೈಕ ಸಂಘಟನೆ ನಮ್ಮದು. ತಾಯಿನಾಡು ನಡಿಗೆ ಸೇವೆ ಸಲ್ಲಿಸುವುದು ಶ್ರೇಷ್ಠ ಕಾರ್ಯ, ವಿಶ್ವ ಕನ್ನಡ ಸಮ್ಮೇಳನದ ಅಧ್ಯಕ್ಷರಾಗಿ ರಾಷ್ಟ್ರಕವಿ ಜಿಎಸ್ ಶಿವರುದ್ರಪ್ಪ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರ್ ಮುಂತಾದ ದಿಗ್ಗಜರು ವೇದಿಕೆಗೆ ಶೋಭೆ ತಂದಿದ್ದಾರೆ. ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನದ ಅಧ್ಯಕ್ಷರಾದವರು ಮುಂದಿನ ವರ್ಷಗಳಲ್ಲಿ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಲು ಪರಿಗಣಿಸಲ್ಪಡುತ್ತಾರೆ ಎಂದರು.

ಹೃದಯವಾಹಿನಿ ಮಂಗಳೂರು, ಮಂಜುನಾಥ್ ಎಜುಕೇಶನ್ ಟ್ರಸ್ಟ್ ರಿ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಗೋವಾ ಕದಂಬ ಪ್ರತಿಷ್ಠಾನ ಪಣಜಿ ಸಂಯುಕ್ತವಾಗಿ ಪಣಜಿಯ ಅಶೋಕ ಪ್ಲಾಜಾ ಸಭಾಂಗಣದಲ್ಲಿ ಏಪ್ರಿಲ್ 12ರಂದು ಒಂದು ದಿನದ 21ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನವನ್ನು ಆಯೋಜಿಸಿದ್ದರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಯುನಿವರ್ಸಲ್ ಫಿಲಂ ಮೇಕರ್ಸ್ ಕೌನ್ಸಿಲ್ ಚೇರ್ಮನ್ ಎಂ ಎ ಮಮ್ಮಿ ಗಟ್ಟಿ ವಹಿಸಿದ್ದರು.

ವಿಶೇಷ ಆಮಂತ್ರಿತರಾದ ಮಂಗಳೂರು ಮಹಾನಗರ ಪಾಲಿಕೆಯ ಎಕ್ಸಿಕ್ಯೂಟ್ ಇಂಜಿನಿಯರ್ ನಾಗರಾಜ್ ಆರ್. ಬಿ. ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜನರು ಯಾಂತ್ರಿಕವಾಗಿ ಬದುಕುತ್ತಿದ್ದಾರೆ. ಜೀವನದಲ್ಲಿ ಕಲೆ ಮತ್ತು ಸಂಸ್ಕೃತಿಗಳನ್ನು ನವಿರಾಗಿಸುವುದನ್ನು ಅಳವಡಿಸಿಕೊಂಡರೆ ಅಥವಾ ಅವುಗಳನ್ನು ಪ್ರೋತ್ಸಾಹಿಸುವ ಕೆಲಸ ಮಾಡಿದರೆ, ಜೀವನ ಒತ್ತಡದಿಂದ ಮುಕ್ತವಾಗುವ ಸಾಧ್ಯತೆ ಕಂಡುಕೊಳ್ಳಬಹುದು ಎಂದರು.

ಮುಖ್ಯ ಅತಿಥಿಗಳಾಗಿ ಮಂಗಳೂರಿನ ನೀರು ಸರಬರಾಜು ಯೋಜನೆ ನಿವೃತ್ತ ಇಂಜಿನಿಯರ್ ಶಂಸುದ್ದೀನ್, ರಾಯಚೂರಿನ ವಾಣಿಜ್ಯೋದ್ಯಮಿ ಈ ಆಂಜನೇಯ, ಗೋವಾ ಕೇಸರಿ ಪತ್ರಿಕೆಯ ಸಂಪಾದಕ ಶ್ರೀನಿವಾಸ ಪೈ ಬ್ಯಾಂಕ್ ಅಧಿಕಾರಿ ಮತ್ತು ಕದಂಬ ಪ್ರತಿಷ್ಠಾನ ಗೋವಾ ಇದರ ಅಧ್ಯಕ್ಷ ಬಾಳೇಶ್ ಕನ್ನಡಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ ಶೈನಿ ಗ್ರೇಸ್, ರುದ್ರಯ್ಯ ಸ್ವಾಮಿ ಹಿರೇಮಠ, ಬಸವರಾಜ್ ಎಚ್, ಭೀಮವ್ವ ಬೆಲ್ಲದ ಬಾಗೆವಾಡಿ ಇವರಿಗೆ ಹೃದಯವಂತರು ಪ್ರಶಸ್ತಿ – 2026 ಪ್ರದಾನ ಮಾಡಲಾಯಿತು.

ಕರ್ನಾಟಕದಿಂದ ಆಗಮಿಸಿದ್ದ ನೂರಕ್ಕೂ ಹೆಚ್ಚು ಕಲಾವಿದರು ವೈವಿಧ್ಯಮಯ ಕಾರ್ಯಕ್ರಮ ನೀಡಿದರು. ಅಂತರಾಷ್ಟ್ರೀಯ ಖ್ಯಾತಿಯ ಹಾಸ್ಯ ಕಲಾವಿದ ಮಹದೇವ ಸತ್ತಿಗೇರಿ ಅವರಿಂದ ನಗೆ ಹೊನಲು ಕಾರ್ಯಕ್ರಮ ಪ್ರೇಕ್ಷಕರನ್ನು ನಗೆಗಡದಲ್ಲಿ ತೇಲಿಸಿತು .

ಶ್ರೀ ಸಾಯಿ ರಾಮನ್ ಕಲಾಕೇಂದ್ರ ತುಮಕೂರು, ಭಾರ್ಗವಿ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ಬೆಂಗಳೂರು ಹಾಗೂ ರತಿಕ ಹಡಗಲಿ ಮತ್ತು ತಂಡ ಧಾರವಾಡ ಇವರಿಂದ ಉಳ್ಳಾಲ ಅಬ್ಬಕ್ಕ ರಾಣಿ ನೃತ್ಯ ರೂಪಕ, ಭರತನಾಟ್ಯ ಮತ್ತು ಜಾನಪದ ನೃತ್ಯಗಳು ಮನಮೋಹಕವಾಗಿ ಮೂಡಿ ಬಂದವು.

ಮಂಗಳೂರಿನ ಆಫೀಸರ್ ಕ್ಲಬ್ ನ ಕರೋಕೆ ತಂಡ ಗಾಯಕರಾದ ನಾಗರಾಜು ಆರ್ ಬಿ, ಶಿವರಾಜ್ ಪಾಂಡೇಶ್ವರ, ಶಂಸುದ್ದೀನ್, ಜಗದೀಶ್ ಪೖ, ರಿಯಾಜ್ ಮಂಗಳೂರು, ಸಂತೋಷಿ ರಾಯಚೂರು, ಚಿತ್ರ ಕಲಾವಿದೆ ಹೇಮಾ ಪಾಟೀಲ್ ಅವರು ನಡೆಸಿಕೊಟ್ಟ ಸ್ವರ – ಕುಂಚ – ಚಿತ್ರ ಕಾರ್ಯಕ್ರಮ ಸಭೆಯನ್ನು ಮಂತ್ರ ಮುಗ್ಧಗೊಳಿಸಿತು. ಅಮೂಲ್ಯ ಸುಜಿತ್ ಮತ್ತು ಅನು ಆನಂದ್ ಅವರ ಸೆಮಿ ಕ್ಲಾಸಿಕಲ್ ಮತ್ತು ಭರತನಾಟ್ಯ ಪ್ರದರ್ಶನ ಸೊಗಸಾಗಿದ್ದವು.

ಪಣಜಿ ಮಕ್ಕಳು ನಡೆಸಿಕೊಟ್ಟ ಪ್ಯಾಶನ್ ಶೋ ವರ್ಣ ರಂಜಿತವಾಗಿತ್ತು. ಪೂರ್ಣಿಮ ಎನ್ ಮತ್ತು ಸಾಗರ್ ಟಿ ಎಸ್ ಸಮ್ಮೇಳನದ ನಿರೂಪಣೆ ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here