ತುಳುವ ಮಹಾಸಭೆ ಇಂಟರ್‌ನ್ಯಾಷನಲ್ : ಬೆಂಗಳೂರು ವಲಯಕ್ಕೆ ನೂತನ ಸಾರಥ್ಯ

0
28

ಅಧ್ಯಕ್ಷರಾಗಿ ಪುರುಷೋತ್ತಮ ಚೇಂಡ್ಲ , ಪ್ರಧಾನ ಸಂಚಾಲಕರಾಗಿ ಶಾಂತಾರಾಮ್ ವಿ. ಶೆಟ್ಟಿ , ಪ್ರಧಾನ ಕಾರ್ಯದರ್ಶಿಯಾಗಿ ಶಿವಾನಂದ ಸಾಲ್ಯಾನ್ ನೇಮಕ

ಬೆಂಗಳೂರು : ತುಳುವ ಮಹಾಸಭೆಯು 2028ಕ್ಕೆ ಶತಮಾನೋತ್ಸವವನ್ನು ಆಚರಿಸುವ ಸಂದರ್ಭದಲ್ಲಿ ತುಳು ಚಳುವಳಿ, ತುಳು ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಹಾಗೂ ತುಳುವರ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಪ್ರಾರಂಭಿಸಿದ ತುಳುವ ಮಹಾಸಭೆ ಇಂಟರ್‌ನ್ಯಾಷನಲ್‌ನ ಬೆಂಗಳೂರು ವಲಯಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ಪುರುಷೋತ್ತಮ ಚೇಂಡ್ಲ – ಅಧ್ಯಕ್ಷರು, ಶಾಂತಾರಾಮ್ ವಿ. ಶೆಟ್ಟಿ – ಪ್ರಧಾನ ಸಂಚಾಲಕರು, ಶಿವಾನಂದ ಸಾಲ್ಯಾನ್ – ಪ್ರಧಾನ ಕಾರ್ಯದರ್ಶಿ

ಪುರುಷೋತ್ತಮ ಚೇಂಡ್ಲ – ಸಂಘಟನಾ ಕ್ಷೇತ್ರದ ಅನುಭವಿ, ಬೆಂಗಳೂರಿನಲ್ಲಿ ಸ್ವಂತ ಉದ್ಯಮ ನಡೆಸುತ್ತಿರುವ ಪುರುಷೋತ್ತಮ ಚೇಂಡ್ಲ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಕಾಂ ಪದವಿ ಪಡೆದಿದ್ದು, ಬಿಸಿನೆಸ್ ಅಂಡ್ ಇಂಡಸ್ಟ್ರಿಯಲ್ ಮ್ಯಾನೇಜ್‌ಮೆಂಟ್ ಹಾಗೂ ಲೇಬರ್ ಲಾ ವಿಷಯಗಳಲ್ಲಿ ಉನ್ನತ ಶಿಕ್ಷಣ ಪಡೆದಿದ್ದಾರೆ. ದಿ ಕೇಂಪ್ಕೋ ಲಿಮಿಟೆಡ್‌ನಲ್ಲಿ ಏರಿಯಾ ಸೇಲ್ಸ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದಿದ್ದಾರೆ.

ತುಳು–ಕನ್ನಡ ನಾಟಕಗಳ ರಚನೆ, ನಿರ್ದೇಶನ ಮತ್ತು ಅಭಿನಯದಲ್ಲಿ ಆಸಕ್ತಿ ಹೊಂದಿರುವ ಅವರು, ಹಲವು ಸಂಘಟನೆಗಳಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ್ದಾರೆ. ಕುಲಾಲ ಸಂಘದಲ್ಲಿ ಕಾರ್ಯದರ್ಶಿಯಾಗಿ ಹಾಗೂ ಮೂರು ಅವಧಿಗಳಲ್ಲಿ ಅಧ್ಯಕ್ಷರಾಗಿ, ಸುಮಾರು 35 ವರ್ಷಗಳ ಕಾಲ ಕಾರ್ಯಕಾರಿ ಸಮಿತಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ತುಳುವೆರೆ ಚಾವಡಿ ಬೆಂಗಳೂರಿನ ಸ್ಥಾಪಕ ಉಪಾಧ್ಯಕ್ಷರಾಗಿ ಹಾಗೂ ಒಂಬತ್ತು ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, ಪ್ರಸ್ತುತ ಗೌರವಾಧ್ಯಕ್ಷರಾಗಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಮಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಅವರ ಸಂಘಟನಾ ಮತ್ತು ಸಮಾಜಸೇವೆಯನ್ನು ಗುರುತಿಸಿ ಸಾಯಿರಾಮ್ ಸೇವಾರತ್ನ, ಸಂಘಟನಾ ಬ್ರಹ್ಮ ಬಾಲೋಡಿ ಮಹಾಬಲ ಹಾಂಡ, ತುಳುನಾಡ್ದ ಬೊಳ್ಳಿ, ಕರ್ನಾಟಕ ನಾಡ ಪೋಷಕ, ಕರ್ನಾಟಕ ಕಲಾ ಸಂಪದ, ಕುಲಾಲ ಕಿರೀಟ, ಬಲಿಯೇಂದ್ರ ಪುರಸ್ಕಾರ ಹಾಗೂ ಸಮಾಜ ಸೇವಾರತ್ನ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ.

ಶಾಂತಾರಾಮ್ ವಿ. ಶೆಟ್ಟಿ – ಸಾಹಿತ್ಯ ಮತ್ತು ಸಂಗೀತದ ಸೇವಕ, ಉಡುಪಿಯ ಶಾಂತಾರಾಮ್ ವಿ. ಶೆಟ್ಟಿ ಅವರು ವಿಜ್ಞಾನ ಪದವೀಧರರಾಗಿದ್ದು, ಬೆಂಗಳೂರಿನಲ್ಲಿ ಸ್ವಂತ ಉದ್ಯಮ ನಡೆಸುತ್ತಿದ್ದಾರೆ. ತುಳು ಸಾಹಿತ್ಯ, ಸಂಗೀತ, ಭಾಷೆ ಮತ್ತು ಸಂಸ್ಕೃತಿಯ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಅವರ ‘ಮಣ್ಣ ಬಾಜನ’ ಕವನ ಸಂಕಲನಕ್ಕೆ ತುಳು ಅಕಾಡೆಮಿಯ ಪುಸ್ತಕ ಪ್ರಶಸ್ತಿ ಲಭಿಸಿದ್ದು, ಅವರು ಮೈಸೂರು ದಸರಾ ಕವಿಗೋಷ್ಠಿಯಲ್ಲಿ ಮೂರು ಬಾರಿ ಭಾಗವಹಿಸಿದ್ದಾರೆ.

ಐಲೇಸಾ – ದಿ ವಾಯ್ಸ್ ಆಫ್ ಓಷನ್ ಸಂಸ್ಥೆಯ ಸ್ಥಾಪಕ ಸದಸ್ಯರಾಗಿ ತುಳು ಸಂಗೀತದ ಜಾಗತಿಕ ಪ್ರಸಾರಕ್ಕೆ ಶ್ರಮಿಸುತ್ತಿದ್ದಾರೆ. ಸಂಗೀತ ಸಾಮ್ರಾಟ್ ವಿ. ಮನೋಹರ್ ಅವರೊಂದಿಗೆ ಸುಮಾರು 35 ತುಳು ಹಾಡುಗಳನ್ನು ಬಿಡುಗಡೆಗೆ ಸಿದ್ಧಪಡಿಸುವ ಕಾರ್ಯದಲ್ಲಿದ್ದಾರೆ. ಗ್ಲೋಬಲ್ ಅಲಯನ್ಸ್ ಆಫ್ ತುಳು ಅಸೋಸಿಯೇಷನ್ ಮೂಲಕವೂ ತುಳು ಭಾಷೆಯ ಮೂಲ ಸ್ವರೂಪವನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಹಿರಿಯ ಸಾಧಕರನ್ನು ಗೌರವಿಸುವ ‘ವಯೋ ಸಮ್ಮಾನ್’ ಯೋಜನೆಯ ಮೂಲಕವೂ ಸಾಹಿತ್ಯ, ಸಂಗೀತ ಹಾಗೂ ಭಾಷಾ ಕ್ಷೇತ್ರದ ಹಿರಿಯರನ್ನು ಸನ್ಮಾನಿಸುವ ಕಾರ್ಯ ನಡೆಸುತ್ತಿದ್ದಾರೆ.

ಶಿವಾನಂದ ಸಾಲ್ಯಾನ್ – ಯುವ ಸಂಘಟನೆಯ ಶಕ್ತಿಯಾಗಿ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಬಂಟಕಲ್ಲು ಗ್ರಾಮದ ರಾಜ ಪೂಜಾರಿ ಮತ್ತು ಪುಷ್ಪ ಪೂಜಾರಿ ದಂಪತಿಗಳ ಪುತ್ರರಾದ ಶಿವಾನಂದ ಸಾಲ್ಯಾನ್ ಅವರು ಎಂ.ಎಸ್.ಆರ್.ಎಸ್. ಕಾಲೇಜು, ಶಿರ್ವದಲ್ಲಿ ಉನ್ನತ ಶಿಕ್ಷಣ ಪಡೆದಿದ್ದಾರೆ.

ನೆಲಮಂಗಲದ ಆಸ್ಕೋ ಸ್ಟೀಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಲ್ಲಿ 26 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿರುವ ಅವರು, ಪ್ರಸ್ತುತವೂ ಅದೇ ಸಂಸ್ಥೆಯಲ್ಲಿ ಸೇವೆ ಮುಂದುವರಿಸಿದ್ದಾರೆ. ಬೆಂಗಳೂರಿನ ಬಿಲ್ಲವ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಬಿಲ್ಲವ ಯುವ ಘಟಕದ ಅಧ್ಯಕ್ಷರಾಗಿ ಹಾಗೂ ಕ್ರೀಡಾ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಪವರ್ ಫ್ರೆಂಡ್ಸ್ ಬೆಂಗಳೂರು (ರಿ.) ಸಂಸ್ಥೆಯ ಅಧ್ಯಕ್ಷರಾಗಿ ಹಲವು ಕ್ರೀಡಾ, ಸಾಂಸ್ಕೃತಿಕ ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ.

ತುಳು ಭಾಷೆಯ ಮಾನ್ಯತೆಗಾಗಿ ನಡೆದ ಹೋರಾಟಗಳಲ್ಲಿ ಭಾಗವಹಿಸಿರುವ ಅವರು, ಕಂಬಳ ನಿಷೇಧದ ವಿರುದ್ಧ ಟಿ. ದಾಸರಹಳ್ಳಿಯಿಂದ ಫ್ರೀಡಂ ಪಾರ್ಕ್‌ವರೆಗೆ ನೂರಾರು ಯುವಕರನ್ನು ಸೇರಿಸಿ ಬೃಹತ್ ಬೈಕ್ ರ್ಯಾಲಿ ಆಯೋಜಿಸಿ ಕಂಬಳಕ್ಕೆ ಬೆಂಬಲ ನೀಡಿದ್ದರು. ಬೆಂಗಳೂರಿನ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವುದರ ಜೊತೆಗೆ, ಸಂಕಷ್ಟದಲ್ಲಿರುವವರಿಗೆ ನೆರವಾಗುವ ಮೂಲಕ ಸಮಾಜಮುಖಿ ಸೇವೆಯಲ್ಲಿಯೂ ಗುರುತಿಸಿಕೊಂಡಿದ್ದಾರೆ.

ಈ ಮೂವರು ನೂತನ ಪದಾಧಿಕಾರಿಗಳ ಅನುಭವ, ಸಂಘಟನಾ ಸಾಮರ್ಥ್ಯ ಹಾಗೂ ತುಳು ಭಾಷೆ–ಸಂಸ್ಕೃತಿಯ ಮೇಲಿನ ಬದ್ಧತೆಯನ್ನು ಬಳಸಿಕೊಂಡು ಬೆಂಗಳೂರಿನ ತುಳುವರನ್ನು ಸಂಘಟಿಸಿ, ತುಳು ಭಾಷೆ, ಸಾಹಿತ್ಯ, ಕಲೆ, ಸಂಗೀತ, ಸಂಸ್ಕೃತಿ ಮತ್ತು ಪರಂಪರೆಯ ಸಂರಕ್ಷಣೆ ಹಾಗೂ ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡಲಾಗುವುದು.

ಈ ನೇಮಕಾತಿಯನ್ನು ತುಳುವ ಮಹಾಸಭೆ ಇಂಟರ್‌ನ್ಯಾಷನಲ್‌ನ ಅಂತರರಾಷ್ಟ್ರೀಯ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ ಹಾಗೂ ಕರ್ನಾಟಕ ರಾಜ್ಯಾಧ್ಯಕ್ಷರಾದ ದೇವೇಂದ್ರ ಹೆಗ್ಡೆ ಕೊಕ್ರಾಡಿ ನೇಮಕ ಮಾಡಿದ್ದು, ಪದಾಧಿಕಾರಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಶುಭಹಾರೈಕೆಗಳನ್ನು ಸಲ್ಲಿಸಿದ್ದಾರೆ.

ಅದೇ ರೀತಿ ತುಳುವರ್ಲ್ಡ್ ಫೌಂಡೇಶನ್‌ನ ಗೌರವಾಧ್ಯಕ್ಷರಾದ ಶ್ರೀಹರಿನಾರಾಯಣದಾಸ ಅಸ್ರಣ್ಣ ಕಟೀಲ್, ಅಧ್ಯಕ್ಷರಾದ ಭಾನುಮತಿ ಶೆಟ್ಟಿ ಕಕ್ವಗುತ್ತು ಹಾಗೂ ನಿರ್ದೇಶಕರಾದ ಡಾ. ರಾಜೇಶ್ ಕೃಷ್ಣ ಆಳ್ವ ಅವರು ನೂತನ ಪದಾಧಿಕಾರಿಗಳನ್ನು ಅಭಿನಂದಿಸಿ, ಅವರ ಸೇವೆಯಿಂದ ಬೆಂಗಳೂರು ವಲಯದಲ್ಲಿ ತುಳು ಸಂಘಟನೆ ಮತ್ತಷ್ಟು ಬಲಗೊಳ್ಳಲಿ ಎಂದು ಶುಭ ಹಾರೈಸಿದ್ದಾರೆ.