ಮುಡಿಪು: ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಕೆಂಗಲ್ ಹನುಮಂತಯ್ಯ ದತ್ತಿನಿಧಿ ಪ್ರಶಸ್ತಿಗೆ ಭಾಜನರಾಗಿರುವ ವಿಧಾನಸಭೆಯ ಸಭಾಧ್ಯಕ್ಷರಾಗಿರುವ ಯು.ಟಿ ಖಾದರ್ ಇವರನ್ನು ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕದ ವತಿಯಿಂದ ಬುಧವಾರ ಕೊಣಾಜೆಯಲ್ಲಿ ಸನ್ಮಾನಿಸಲಾಯಿತು.
ಅಭಿನಂದನ ನುಡಿಗಳನ್ನಾಡಿದ ಉಳ್ಳಾಲ ಕಸಾಪ ಅಧ್ಯಕ್ಷ ಡಾ.ಧನಂಜಯ ಕುಂಬ್ಳೆ ಮಾತನಾಡಿ ಕೆಂಗಲ್ ಹನುಮಂತಯ್ಯನವರು ದೂರದೃಷ್ಟಿಯುಳ್ಳ ನಾಯಕರಾಗಿ, ತಾವು ಮುಖ್ಯಮಂತ್ರಿಯಾಗಿದ್ದಾಗ ಸುಂದರವಾದ ವಿಧಾನಸೌಧ ನಿರ್ಮಾಣ ಮಾಡಿ ಹೆಸರಾದವರು. ಅವರ ಹೆಸರಿನ ಪ್ರಶಸ್ತಿಯು ಈಗಿನ ವಿಧಾನಸಭೆಯ ಅಧ್ಯಕ್ಷರಾದ ಯು.ಟಿ ಖಾದರ್ ಅವರಿಗೆ ಅರ್ಹವಾಗಿಯೇ ಸಂದಿದೆ. ವಿಧಾನಸೌಧವನ್ನು ಆಕರ್ಷಕಗೊಳಿಸುವ ಜನಸಾಮಾನ್ಯರಿಗೆ ಹತ್ತಿರ ಮಾಡುವ ಜನಮುಖಿ ನಾಯಕರಾಗಿ ಖಾದರ್ ಅವರು ಮೂಡಿಬಂದಿದ್ದಾರೆ. ಇತ್ತೀಚೆಗೆ ವಿಧಾನಸೌಧದಲ್ಲಿ ಪುಸ್ತಕಮೇಳ, ಸಾಹಿತ್ಯ ಚರ್ಚೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಕನ್ನಡ ನಾಡು ನುಡಿಗೆ ಉತ್ತೇಜನ ನೀಡಿದ್ದಾರೆ. ಇತ್ತೀಚೆಗೆ ಮಂಗಳೂರು ವಿವಿಯಲ್ಲಿ ನಡೆದ ದ.ಕ ಜಿಲ್ಲಾ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಮುಖ್ಯ ಕಾರಣರಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಉಳ್ಳಾಲ ಕಸಾಪ ಗೌರವ ಕಾರ್ಯದರ್ಶಿ ರವೀಂದ್ರ ರೈ ಕಲ್ಲಿಮಾರ್, ಜಿಲ್ಲಾ ಸಂಘಟನಾ ಕಾರ್ದರ್ಶಿ ಲ.ಚಂದ್ರಹಾಸ ಶೆಟ್ಟಿ ದೇರಳಕಟ್ಟೆ, ಮುಖಂಡರುಗಳಾದ ಲ.ಪ್ರಸಾದ್ ರೈ ಕಲ್ಲಿಮಾರ್, ಅಬ್ದುಲ್ ರಹಿಮಾನ್ ಕೋಡಿಜಾಲ್, ಸುರೇಂದ್ರ ರೈ ಗ್ರಾಮಚಾವಡಿ, ಉಳ್ಳಾಲ ಕಸಾಪ ಸಂಘಟನಾ ಕಾರ್ಯದರ್ಶಿಗಳಾದ ತ್ಯಾಗಂ ಹರೇಕಳ, ರಾಧಾಕೃಷ್ಣ ರಾವ್ ಉಪಸ್ಥಿತರಿದ್ದರು. ಶಿಕ್ಷಕ ತ್ಯಾಗಂ ಹರೇಕಳ ನಿರೂಪಿಸಿದರು.
ಬಾಕ್ಸ್
ಹಿರಿಯರ ದಾರಿ ನಮಗೆ ಪ್ರೇರಣೆ : ಖಾದರ್
ಹಿರಿಯರ ಬದುಕಿದ ದಾರಿ ನಮಗೆ ಪ್ರೇರಣೆ. ಕೆಂಗಲ್ ಹನುಮಂತಯ್ಯ ನಾಡು ಕಂಡ ಮುತ್ಸದ್ಧಿ ನಾಯಕರು. ಅವರ ಹೆಸರಿನ ಪ್ರಶಸ್ತಿ ಬಂದಿರುವುದಕ್ಕೆ ಸಂತೋಷವಾಗಿದೆ ಎಂದು ಯು.ಟಿ ಖಾದರ್ ಅಭಿನಂದನೆಗೆ ಪ್ರತಿಕ್ರಿಯೆ ನೀಡಿದರು.