ಮಂಗಳೂರು : ಹಣ ಕಳವು ಮಾಡಿರುವ ಆರೋಪ ಹೊರಿಸಿ ತನ್ನ ಸಹೋದರನ ಮಗಳಿಗೆ ಮರದ ಒಣಕೆಯಿಂದ ಗಂಭೀರ ಹಲ್ಲೆ ನಡೆಸಿದ ಘಟನೆ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕುಪ್ಪೆಪದವು ಕಿಲೆಂಜಾರು ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ.
ಹಲ್ಲೆಗೊಳಗಾದವರನ್ನು ಕುಪ್ಪೆಪದವು ಕಿಲೆಂಜಾರು ಹೊಸಮನೆ ನಿವಾಸಿ ಮೈಸೀನ್ (29) ಎಂದು ಗುರುತಿಸಲಾಗಿದ್ದು, ಆರೋಪಿ ಆಕೆಯ ಚಿಕ್ಕಪ್ಪ ಬಶೀರ್ ಎಂದು ತಿಳಿದುಬಂದಿದೆ.
ಪೊಲೀಸರ ಮಾಹಿತಿ ಪ್ರಕಾರ, ಆರೋಪಿ ಬಶೀರ್ ಅವರ ಮನೆಯಲ್ಲಿ ಹಣ ಕಳೆದು ಹೋಗಿರುವ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ ಸುಮಾರು 9.30ರ ವೇಳೆಗೆ ಮೈಸೀನ್ ಅವರ ಮನೆಗೆ ತೆರಳಿ ವಿಚಾರಿಸಿದ್ದಾರೆ. ಈ ವೇಳೆ ಹಣ ಕಳೆದುಹೋಗಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಮೈಸೀನ್ ತಿಳಿಸಿದ್ದಾಳೆ ಎನ್ನಲಾಗಿದೆ.
ಇದರಿಂದ ಆಕ್ರೋಶಗೊಂಡ ಬಶೀರ್, “ನೀನೇ ಹಣ ಕದ್ದಿರುವೆ, ನಿನ್ನ ಮಾನ-ಮರ್ಯಾದೆ ತೆಗೆಯುತ್ತೇನೆ” ಎಂದು ಆರೋಪಿಸಿ ಮರದ ಒಣಕೆಯಿಂದ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಹಲ್ಲೆಯಿಂದ ಮೈಸೀನ್ ಅವರ ಎಡಕಾಲಿನ ಹಿಂಭಾಗ ಹಾಗೂ ಬೆನ್ನಿನ ಮಧ್ಯಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಸಂತ್ರಸ್ತೆಯ ದೂರಿನ ಮೇರೆಗೆ ಬಜ್ಪೆ ಪೊಲೀಸರು ಆರೋಪಿ ಬಶೀರ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) 2023ರ ಸೆಕ್ಷನ್ 118(1), 351(2) ಹಾಗೂ 352ರಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದಯ ತಿಳಿದುಬಂದಿದೆ.

