ಬೆಂಗಳೂರು: ಸಿಗರೇಟ್ ತಂದು ಕೊಡದಿದ್ದಕ್ಕೆ ಕಾರಿನಿಂದ ಗುದ್ದಿ ಯುವಕನನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಕೋಣನಕುಂಟೆ ಕ್ರಾಸ್ ಬಳಿ ನಡೆದಿದೆ. ಶನಿವಾರ (ಮೇ.10) ನಸುಕಿನ ಜಾವ ನಾಲ್ಕು ಗಂಟೆಗೆ ಘಟನೆ ನಡೆದಿದೆ. ಭಯಾನಕ ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಾಫ್ಟ್ ವೇರ್ ಇಂಜಿನಿಯರ್ ಸಂಜಯ್ ಮೃತ ದುರ್ದೈವಿ. ಮತ್ತೋರ್ವ ಯುವಕ ಚೇತನ್ ಎಂಬುವರಿಗೆ ಗಂಭೀರ ಗಾಯವಾಗಿದೆ. ಕಾರು ಚಾಲಕ ಆರೋಪಿ ಪ್ರತೀಕ್ನನ್ನು ಸುಬ್ರಹ್ಮಣ್ಯಪುರ ಪೊಲೀಸರು ಬಂಧಿಸಿದ್ದಾರೆ.
ಸಂಜಯ್ ಮತ್ತು ಚೇತನ್ ಇಬ್ಬರೂ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದರು. ರಾತ್ರಿ ವರ್ಕ್ ಫ್ರಮ್ ಹೋಂ ಕೆಲಸ ಮುಗಿಸಿ ನಸುಕಿನ ಜಾವ 4 ಗಂಟೆಗೆ ಕೋಣನಕುಂಟೆ ಕ್ರಾಸ್ ಬಳಿ ಇದ್ದ ತಳ್ಳುವ ಗಾಡಿ ಬಳಿ ನಿಂತು ಚಹಾ ಕುಡಿಯುತ್ತಿದ್ದ ನಿಂತಿದ್ದರು. ಈ ವೇಳೆ ಪ್ರತೀಕ್ ದಂಪತಿ ಬರ್ತ್ ಡೇ ಪಾರ್ಟಿ ಮುಗಿಸಿ ಆರ್ಆರ್ ನಗರದಲ್ಲಿನ ತಮ್ಮ ಮನೆಗೆ ಕ್ರೇಟಾ ಕಾರಲ್ಲಿ ತೆರಳುತ್ತಿದ್ದರು.
ಕೋಣನಕುಂಟೆ ಕ್ರಾಸ್ ಬಳಿ ಕಾರು ನಿಲ್ಲಿಸಿದ ಆರೋಪಿ ಪ್ರತೀಕ್ ಯುವಕರನ್ನು ಕರೆದು, ಸಿಗರೇಟ್ ತೆಗೆದುಕೊಡುವಂತೆ ಹೇಳಿದ್ದಾನೆ. ಇದಕ್ಕೆ ಸಂಜಯ್ ಹಾಗೂ ಚೇತನ್ ನಿರಾಕರಿಸಿದ್ದರು. ಬೇಕಿದ್ದರೇ ನೀವೆ ಬಂದು ತೆಗೆದುಕೊಳ್ಳಿ ಎಂದಿದ್ದರು. ಇಷ್ಟಕ್ಕೆ, ಚಹಾ ಅಂಗಡಿ ಬಳಿ ದಂಪತಿ ಹಾಗೂ ಯುವಕರ ಮಧ್ಯೆ ಗಲಾಟೆಯಾಗಿದೆ. ಆಗ, ಸ್ಥಳಿಯರು ಗಲಾಟೆ ತಿಳಿಗೊಳಿಸಿದ್ದಾರೆ. ನಂತರ, ಯುವಕರು ಯಮಹಾ R15 ಬೈಕ್ ಹತ್ತಿ ಹೊರಟಿದ್ದಾರೆ. ಸಂಜಯ್ ಬೈಕ್ ಚಾಲನೆ ಮಾಡುತ್ತಿದ್ದರೇ, ಚೇತನ್ ಹಿಂಬದಿ ಕೂತಿದ್ದರು. ಯುವಕರು ಯೂ ಟರ್ನ್ ತೆಗೆದುಕೊಳ್ಳುವ ವೇಳೆ ಕಾರಿನಲ್ಲಿ ಬಂದ ಪ್ರತೀಕ್ ಗುದ್ದಿದ್ದಾನೆ. ಕಾರು ಗುದ್ದಿದ ರಭಸಕ್ಕೆ ಬೈಕ್ ಅಂಗಡಿಯ ಶೆಟರ್ಗೆ ಬಡಿದಿದೆ.
ಸಂಜಯ್ ಅವರಿಗೆ ಗಂಭೀರ ಗಾಯವಾಗಿ ಪ್ರಜ್ಞಾಹೀನನಾಗಿದ್ದರು. ಕೂಡಲೆ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಎರಡು ದಿನದ ಹಿಂದೆ ಸಂಜಯ್ ಮೃತಪಟ್ಟಿದ್ದಾರೆ. ಸಂಜಯ್ ಅಂಗಾಂಗ ದಾನ ಮಾಡಿ ಕುಟುಂಬ ಸಾರ್ಥಕತೆ ಮೆರೆದಿದೆ. ಇನ್ನು, ಮೃತ ಸಂಜಯ್ ಹಾಸನ ಮೂಲದವರು. ಗಾಯಾಳು ಚೇತನ್ ಉತ್ತರ ಕನ್ನಡದರು.
ಕೊಲೆ ಪ್ರಕರಣ ದಾಖಲಿಸಿಕೊಂಡು ಸುಬ್ರಹ್ಮಣ್ಯಪುರ ಪೊಲೀಸರು ಆರೋಪಿ ಪ್ರತೀಕ್ನನ್ನು ಬಂಧಿಸಿದ್ದಾರೆ. ಆರೋಪಿ ಪ್ರತೀಕ್ ಮಾಗಡಿ ರಸ್ತೆಯಲ್ಲಿರುವ ಖಾಸಗಿ ಕಂಪನಿಯಲ್ಲಿ ಸೇಲ್ಸ್ ಮ್ಯಾನೆಜರ್ ಆಗಿದ್ದಾನೆ. ಗಲಾಟೆಯಾದಾಗ ಪತಿ ಪ್ರತೀಕ್ಗೆ ಪತ್ನಿ ಬುದ್ದಿ ಹೇಳಿ ಸಮಾಧಾನ ಮಾಡಿದ್ದರು. ಮನೆಗೆ ಹೋಗೋಣ ಎಂದು ಹೇಳಿ ಕರೆದುಕೊಂಡು ಹೋಗುತ್ತಿದ್ದರು. ಬೈಕ್ ಮುಂದೆ ಹೋಗುತ್ತಿದ್ದಂತೆ ಯೂ ಟರ್ನ್ ತೆಗೆದುಕೊಳ್ಳುವಾಗ ಪ್ರತೀಕ್ ಬೈಕ್ಗೆ ಗುದ್ದಿದ್ದಾನೆ. ಗಂಡನ ವರ್ತನೆ ಕಂಡು ಮಡದಿ ಬೆಚ್ಚಿ ಬಿದ್ದಿದ್ದಾರೆ.