ಬೆಂಗಳೂರು : ಶ್ರೀಲಂಕಾದಲ್ಲಿ ನಡೆದ ಪ್ರತಿಷ್ಠಿತ ಮುಯ್ ಥಾಯ್ ಏಷ್ಯನ್ ಗೇಮ್ಸ್-2026 ಕ್ರೀಡಾಕೂಟದಲ್ಲಿ ಬೆಂಗಳೂರಿನ ಯುವ ಕ್ರೀಡಾಪಟು ಶ್ರೀಹರ್ಷ ಬಿ.ಕೆ. ಪಾಕಿಸ್ತಾನದ ಸ್ಪರ್ಧಿಯನ್ನು ಮಣಿಸಿ ಚಿನ್ನದ ಪದಕ ಗೆದ್ದು ದೇಶ ಹಾಗೂ ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ.
ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣೆಯ ಎಎಸ್ಐ ಕಾಂತರಾಜು ಅವರ ಪುತ್ರನಾದ ಶ್ರೀಹರ್ಷ, 57 ಕೆಜಿ ವಿಭಾಗದ ಮುಯ್ ಥಾಯ್ ಸ್ಪರ್ಧೆಯಲ್ಲಿ ಭಾರತದ ಪರ ಕಣಕ್ಕಿಳಿದಿದ್ದರು. ಶ್ರೀಲಂಕಾದ ನೆಗೊಂಬೋದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ಸ್ಪರ್ಧಿಯನ್ನು ಸೋಲಿಸಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಇಂಟರ್ನ್ಯಾಷನಲ್ ಥಾಯ್ ಮಾರ್ಷಲ್ ಆರ್ಟ್ಸ್ (ITMA) ಸಂಸ್ಥೆ ಆಯೋಜಿಸಿದ್ದ ‘ಇಂಟರ್ನ್ಯಾಷನಲ್ ಅಂಡ್ ಥಾಯ್ ಮಾರ್ಷಲ್ ಆರ್ಟ್ಸ್ ಏಷ್ಯನ್ ಗೇಮ್ಸ್-2026’ನಲ್ಲಿ ಭಾರತವನ್ನು ಪ್ರತಿನಿಧಿಸಿದ ಶ್ರೀಹರ್ಷ ಅವರ ಸಾಧನೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಮೂಲತಃ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನವರಾದ ಶ್ರೀಹರ್ಷ ಅವರಿಗೆ ಈ ಮಟ್ಟಕ್ಕೆ ತಲುಪಲು ಯಾವುದೇ ವಿಶೇಷ ಸರ್ಕಾರಿ ನೆರವು ದೊರಕಿರಲಿಲ್ಲ. ಆರ್ಥಿಕ ಸಂಕಷ್ಟ, ಸೌಲಭ್ಯಗಳ ಕೊರತೆ ನಡುವೆಯೂ ತಂದೆಯ ಬೆಂಬಲ ಮತ್ತು ಸ್ವಂತ ಕಠಿಣ ಪರಿಶ್ರಮದ ಮೂಲಕ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಚಿನ್ನ ಗೆದ್ದು ಕನ್ನಡಿಗರ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಈ ಸಾಧನೆಯನ್ನು ಗುರುತಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತ Seemanth Kumar Singh ಅವರು ಶ್ರೀಹರ್ಷ ಅವರನ್ನು ಕಚೇರಿಗೆ ಆಹ್ವಾನಿಸಿ ಸನ್ಮಾನಿಸಿ ಅಭಿನಂದಿಸಿದ್ದಾರೆ.

